ಚಿತ್ರದುರ್ಗ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದರು. ಕೊರಳಿಗೆ ಲಿಂಗಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು.
ಮುರುಘಾ ಮಠದಲ್ಲಿ ಬುಧವಾರ ನಡೆದ ಮಾಠಾಧೀಶರೊಂದಿಗಿನ ಸಭೆಯಲ್ಲಿ ಅವರು ಬಸವತತ್ವ ಪರಿಪಾಲನೆಯ ವಾಗ್ದಾನ ನೀಡಿದರು. ಲಿಂಗಪೂಜೆಯ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಮಠದ ಪ್ರತಿನಿಧಿಯೊಬ್ಬರನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡರು.
‘ರಾಹುಲ್ ಗಾಂಧಿ ಅವರು ಮಠ ಹಾಗೂ ಗುರು ಪರಂಪರೆಯ ಬಗ್ಗೆ ಪ್ರಶ್ನಿಸಿದರು. ಬಸವತತ್ವ ಹಾಗೂ ಕಾಯಕ ಪ್ರಜ್ಞೆ ಬಗ್ಗೆ ವಿವರಿಸಿದೆವು. ಲಿಂಗದೀಕ್ಷೆಯ ಕುರಿತು ಮಾಹಿತಿ ನೀಡಿ, ಅಂಗೈನಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪ್ರಾತ್ಯಕ್ಷಿಕೆ ತೋರಿಸಿದೆವು. ಇದರಿಂದ ಪ್ರೇರಣೆಗೊಂಡ ಅವರು ಲಿಂಗದೀಕ್ಷೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದರು’ ಎಂದು ಶಿವಮೂರ್ತಿ ಮುರುಘಾ ಶರಣರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಲಿಂಗಪೂಜೆಯ ಮೂರು ಹಂತಗಳನ್ನು ವಿವರಿಸಿದೆವು. ಲಿಂಗವನ್ನು ದೇಹಕ್ಕೆ ಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು. ಬಸವತತ್ವ ಪರಿಪಾಲನೆ ಮಾಡುವುದಾಗಿ ಸ್ವಯಂಪ್ರೇರಣೆಯಿಂದ ವಾಗ್ದಾನ ನೀಡಿದ್ದಾರೆ’ ಎಂದು ವಿವರಿಸಿದರು.