ಚಿತ್ರದುರ್ಗ: ವಿದ್ಯುತ್ ಬಳಕೆ ಮಾಡಿದ ಗ್ರಾಹಕರೊಬ್ಬರಿಗೆ ದೋಷಪೂರಿತ ಬಿಲ್ ನೀಡಿದ ಬೆಸ್ಕಾಂ ವಿರುದ್ಧದ ಆರೋಪ ಸಾಬೀತಾಗಿದ್ದು, ₹ 15 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಐಯುಡಿಪಿ ಬಡಾವಣೆಯ ಎನ್.ಜಿ.ಶ್ರೀಧರರಾವ್ ಪರಿಹಾರ ಪಡೆದ ಗ್ರಾಹಕ. ವೃತ್ತಿಯಲ್ಲಿ ವಕೀಲರೂ ಆಗಿರುವ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಗೆದ್ದಿದ್ದಾರೆ.
2020ರ ಸೆಪ್ಟೆಂಬರ್ನಲ್ಲಿ ಶ್ರೀಧರರಾವ್ ಅವರಿಗೆ ₹ 6,462 ವಿದ್ಯುತ್ ಬಿಲ್ ಅನ್ನು ಬೆಸ್ಕಾಂ ನೀಡಿತ್ತು. ಇದರಿಂದ ಅಚ್ಚರಿಗೊಂಡ ಅವರು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ, ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಗ್ರಾಹಕರಿಗೆ ₹ 10 ಸಾವಿರ ಪರಿಹಾರ ನೀಡುವಂತೆ ಆದೇಶ ನೀಡಿತು. ನ್ಯಾಯಾಲಯಕ್ಕೆ ಮಾಡಿದ ವೆಚ್ಚಕ್ಕಾಗಿ ₹ 5 ಸಾವಿರ ನೀಡುವಂತೆ ಸೂಚಿಸಿದೆ.