ಚಿತ್ರದುರ್ಗ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಪಿ.ಎಂ.ತಿಪ್ಪೇಸ್ವಾಮಿ ವಿರುದ್ಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಿಗೆರೆ ಕ್ಷೇತ್ರದ ತಿಪ್ಪೇಸ್ವಾಮಿ ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಬಳಿ ಆರೋಪಿ ₹ 8 ಲಕ್ಷ ಸಾಲ ಪಡೆದಿದ್ದನು. ಸಾಲ ಮರುಪಾವತಿಸುವ ನೆಪದಲ್ಲಿ ಶನಿವಾರ ರಾತ್ರಿ ಮಹಿಳೆಯನ್ನು ಮನೆಯ ಬಳಿಗೆ ಕರೆಸಿಕೊಂಡಿದ್ದನು. ಹಣ ನೀಡುವ ಬದಲು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದನು ಎಂದು ಭರಮಸಾಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಸಿರಿಗೆರೆಯಿಂದ ಜಿಲ್ಲಾ ಆಸ್ಪತ್ರೆಗೆ ಸಂತ್ರಸ್ತೆ ಬರುವ ಸಮಯದಲ್ಲಿ ಕಾರು ಅಡ್ಡಹಾಕಿ ತಿಪ್ಪೇಸ್ವಾಮಿ ಗಲಾಟೆ ನಡೆಸಿದ್ದಾನೆ. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.