ತಂಗಟೆ ಹೂ ತರಲು ಮೆರವಣಿಗೆಯ ಸಂಭ್ರಮ

ಚಿಕ್ಕಜಾಜೂರು: ಸಮೀಪದ ತಣಿಗೆಹಳ್ಳಿ ಗ್ರಾಮದಲ್ಲಿನ ತಾಂಡಾದ ಜನರು ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬಂದಿದ್ದಾರೆ.
ಶುಕ್ರವಾರ ಬೆಳಿಗ್ಗೆ ಯುವತಿಯರು ಹಟ್ಟಿಗೆ ಹಾಕಲು ತಂಗಟೆ ಹೂವನ್ನು ತರಲು ಬುಟ್ಟಿಯನ್ನು ಹಿಡಿದು, ಅಡಿವಿಗೆ ಹೊರಟಾಗ, ಗ್ರಾಮದ ಯುವಕರು ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಕಳುಹಿಸಿಕೊಟ್ಟರು.
ಮಧ್ಯಾಹ್ನ ತಂಗಟೆ, ಅನ್ನೆ, ಅವರೆ, ತೊಗರಿ ಹೂವು, ರಾಗಿ ತೆನೆ, ಉತ್ತರಾಣಿ ಕಡ್ಡಿ ಮತ್ತಿತರ ಹಟ್ಟಿಗೆ ಹಾಕುವ ಸಾಮಗ್ರಿಗಳೊಂದಿಗೆ ಗ್ರಾಮಕ್ಕೆ ಹಿಂತಿರುಗಿದ ಯುವತಿಯರನ್ನು ಹಾಡುಗಳೊಂದಿಗೆ ಯುವಕರು–ನೃತ್ಯದ ಮೂಲಕ ದೇವಸ್ಥಾನಕ್ಕೆ ಕರೆ ತಂದರು.
ಯುವತಿಯರು ಈ ರೀತಿ ಹೂವನ್ನು ತಂದು ಕೊಡುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ವರ ಸಿಗುತ್ತಾನೆ. ಅವರ ಜೀವನ ಉತ್ತಮವಾಗಿರುತ್ತದೆ ಎಂಬುದು ನಂಬಿಕೆ. ಹೀಗಾಗಿ, ಗ್ರಾಮದ ಜನರು ಯಾವುದೇ ನಗರ, ಪಟ್ಟಣಗಳಲ್ಲಿ ಇದ್ದರೂ, ದೀಪಾವಳಿಗೆ ಕುಟುಂಬದವರೊಂದಿಗೆ ಬಂದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಗ್ರಾಮದ ನಾಯಕರಾದ ಪರಮೇಶ್ವರನಾಯ್ಕ್, ಮೂರ್ತಿನಾಯ್ಕ, ರಾಜಾನಾಯ್ಕ್, ಕಾರಬಾರಿಗಳಾದ ಮಂಜಾನಾಯ್ಕ್, ಲೋಕೇಶ ನಾಯ್ಕ್, ಬಿ. ದುರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜಿಬಾಯಿ ಸುರೇಶ್, ಸುಧಾ ಚಂದ್ರಶೇಖರ್, ಗೋವಿಂದನಾಯ್ಕ್, ತಿಪ್ಪೇಸ್ವಾಮಿ ನಾಯ್ಕ್, ರಾಜಾನಾಯ್ಕ್, ಶೃತಿಕುಮಾರ್ ನಾಯ್ಕ್ ಮಾಹಿತಿ ನೀಡಿದರು.
ಹೋಬಳಿಯ ಗುಲಗಂಜಿಹಟ್ಟಿ, ಐಯ್ಯನಹಳ್ಳಿ, ನಂದಿಹಳ್ಳಿ, ಕಾಳಘಟ್ಟ ಲಂಬಾಣಿ ತಾಂಡಾ, ಗಂಜಿಗಟ್ಟೆ ಲಂಬಾಣಿ ತಾಂಡಾಗಳಲ್ಲೂ ಬಂಜಾರರು ಸಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.