ಭರಮಸಾಗರ: ದೀಪಾವಳಿ ಅಂಗವಾಗಿ ಕೇದಾರ ಗೌರಿ ಪೂಜೆ

ಭರಮಸಾಗರ: ದೀಪಾವಳಿಯ ಅಂಗವಾಗಿ ಆಚರಿಸುವ ಕೇದಾರ ಗೌರಿ ಪೂಜೆ ದೀಪಾವಳಿ ಅಮಾವಾಸ್ಯೆಯಾದ ಗುರುವಾರದಿಂದ ಆರಂಭವಾಯಿತು.
ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಯಿಂದ ಗಂಗಾಪೂಜೆ ಮಾಡಿಕೊಂಡು ಗಂಗೆಯನ್ನು ಕಳಸದಲ್ಲಿ ತಂದು ವಿಶೇಷವಾಗಿ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಗಂಗೆಯನ್ನು ತಂದಾಗ ಮನೆಯ ಮಹಿಳೆಯರು ಓಕಳಿ ಬೆಳಗಿ ಆಹ್ವಾನಿಸಿದರು. ಮನೆಯ ಹಿರಿಯರ ಕಾರ್ಯದೊಂದಿಗೆ ಪೂಜೆ ಆರಂಭಗೊಂಡಿತು.
ಕರಿನಾಗಶೆಟ್ರು, ಕಾಡೇಹಳ್ಳಿ, ಮರಿಬೆಶೆಟ್ರು, ಬಸೆಟ್ರು, ತುರುವನೂರು, ಅಮಕುಂಡಿ, ಹುಬ್ಬಳ್ಳಿ ವಂಶದ ಕುಟುಂಬ ಹಾಗೂ ಬಣಜಿಗ ವೀರಶೈವ ಲಿಂಗಾಯತ ಜನಾಂಗದ ಕುಟುಂಬಗಳಲ್ಲಿ ಆಚರಣೆಯಲ್ಲಿ ಬಂದಿರುವ ಈ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ.
ಹಬ್ಬದ ಅಂಗವಾಗಿ ಪಟ್ಟಣದ ತುಂಬಾ ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಮನೆಯ ಮುಂದೆ ಕಲಾತ್ಮಕ ರಂಗೋಲಿ ಹಾಕಿ ಹೊಸಬಟ್ಟೆ ತೊಟ್ಟು ಕೇದಾರ ಗೌರಿ ಪ್ರತಿಷ್ಟಾಪಿಸಲ್ಪಟ್ಟ ಮನೆಗೆ ಬಾಗಿನ ಹಿಡಿದು ಪೂಜೆ ಸಲ್ಲಿಸಲು ಕುಟುಂಬಸ್ತರು ಹೋಗುತ್ತಿರುವುದು ಕಂಡುಬಂತು.
ಶನಿವಾರ ಪೂಜೆ ಸಂಪನ್ನಗೊಳ್ಳಲಿದ್ದು ದೊಡ್ಡಪೇಟೆಯಲ್ಲಿ ಮೆರವಣಿಗೆ ಮೂಲಕ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುವುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.