ನಾಯಕನಹಟ್ಟಿ:ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ದೇವರ ಮರಿಪರಿಷೆ ಕಾರ್ಯಕ್ರಮವು ಸರಳವಾಗಿ ಪೂಜಾ ವಿಧಿವಿಧಾನಗಳ ಮೂಲಕ ನಡೆಯಿತು.
ಸೋಮವಾರ ಬೆಳಿಗ್ಗೆಯಿಂದಲೇ ಸ್ವಾಮಿ ಹೊರಮಠ ಹಾಗೂ ಒಳಮಠ ದೇವಾಲಯಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 8ಕ್ಕೆ ದೇವರಿಗೆ ಮಹಾ ಮಂಗಳಾರತಿ ಮಾಡಲಾಯಿತು. ನಂತರ ನೆರೆದ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಯಿತು. ದೇವಾಲಯದ ಆವರಣದಲ್ಲಿ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು.
ದರ್ಶನ ಪಡೆದ ಭಕ್ತರು ದೇವಾಲಯದ ಆವರಣದಲ್ಲಿ ಕೊಬ್ಬರಿ ಸುಡುತ್ತಾ ದೇವರಿಗೆ ಅರ್ಪಿಸುತ್ತಿದ್ದರು. ಹೊರಮಠದಲ್ಲಿ ಭಕ್ತರು ಪರುವು ಮಾಡುವ ಮೂಲಕ ತಮ್ಮ ಹರಕೆ ಪೂರೈಸಿದರು. ಯುವಕರು ಸುಮಾರು 80 ಅಡಿ ಎತ್ತರದ ರಥದ ಮೇಲಿರುವ ಕಳಸಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಪಟ್ಟರು.
ಸಂಜೆ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಒಳಮಠದಿಂದ ತೇರುಬೀದಿ ಮಾರ್ಗವಾಗಿ ಹೊರಮಠಕ್ಕೆ ಬಂದು ವಾರೋತ್ಸವ ಕಾರ್ಯಕ್ರಮ ನಡೆಸಲಾಯಿತು.
ನೀರಸ ವ್ಯಾಪಾರ: ಕೊರೊನಾ ಭೀತಿಯಿಂದ ಪಟ್ಟಣದಲ್ಲಿ ಅಂಗಡಿಗಳನ್ನು ತೆರೆಯದಂತೆ ಸೂಚಿಸಲಾಗಿತ್ತು. ಆದರೂ ಬೆಂಡು ಬತ್ತಾಸು ಅಂಗಡಿ, ಬಳೆ ವ್ಯಾಪಾರಿಗಳು ಅಂಗಡಿ ತೆರೆದಿದ್ದರು. ಸಂತೆಪೇಟೆ ಮೈದಾನ, ತೇರುಬೀದಿಯ ಮಳಿಗೆಗಳನ್ನು ನೀರಸ ವಹಿವಾಟು ನಡೆಯಿತು.
ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ಸದಸ್ಯರಾದ ಲಲಿತಮ್ಮ, ಹಂಸವೇಣಿ, ಕೆ. ನಾಗಪ್ಪ, ಎಸ್.ವಿ. ತಿಪ್ಪೇಸ್ವಾಮಿರೆಡ್ಡಿ, ಎನ್.ಬಿ. ಮುನಿಯಪ್ಪ, ಟಿ.ರುದ್ರಮುನಿ, ಗೋವಿಂದರಾಜ್, ಎಸ್. ಸತೀಶ್ ಇದ್ದರು.