ಮೊಳಕಾಲ್ಮುರು:ಗ್ರಾಮಗಳಲ್ಲಿ ನಿವೇಶನ ಹಾಗೂ ಮನೆ ಇ-ಸ್ವತ್ತು ಮಾಡಿಕೊಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಇದರಿಂದ ಹಲವು ತಾಂತ್ರಿಕಸಮಸ್ಯೆಗಳು ಎದುರಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರು ಬಾರದಂತೆ ಪಿಡಿಒಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಶಶಿಕಲಾ ಸುರೇಶ್ ಬಾಬು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಸತಿ ಯೋಜನೆ ಪ್ರಗತಿ, ಆಸ್ತಿ ಪರಭಾರೆಗೆ ತೊಂದರೆಯಾಗುವ ಜತೆಗೆ ಸರ್ಕಾರಕ್ಕೆ ಹೋಗುವ ಆದಾಯಕ್ಕೂ ಕತ್ತರಿ ಬೀಳುತ್ತಿದೆ. ಕೆಲವು ಪಂಚಾಯಿತಿಗಳಲ್ಲಿ ವಿನಾ ಕಾರಣ ಇ-ಸ್ವತ್ತು ಮಾಡಿಕೊಡಲು ಅಲೆದಾಡಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಂದಾಯ ವಸೂಲಿಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ಸರ್ಕಾರದ ಮಾರ್ಗಸೂಚಿಅನುಸರಿಸಿ ಕಂದಾಯ ವಸೂಲಿ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂಭಾವ್ಯಸಮಸ್ಯೆ ಎದುರಾಗುವುದು ಕಂಡುಬಂದಲ್ಲಿ ತಕ್ಷಣವೇ ಕ್ರಿಯಾಯೋಜನೆ ಸಿದ್ಧ ಮಾಡಿಕೊಂಡು ಸಲ್ಲಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಮಾಡಿಕೊಂಡು ಸೇವೆಗೆ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಕಾರಣ ನೀತಿ ಸಂಹಿತೆ ಜಾರಿಯಾದ ಪರಿಣಾಮ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಮುಂಡ್ರಗಿ ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬೋರಮ್ಮ ಪಾಲನಾಯಕ, ಉಪಾಧ್ಯಕ್ಷೆ ಹನುಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್, ಇಒ ಎಚ್. ಪ್ರಕಾಶ್ ಇದ್ದರು.