ಚಳ್ಳಕೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆದಾರರ ಸಂಘದ ಕಾರ್ಯಕರ್ತರು ಶನಿವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.
ಆರೋಗ್ಯ ಸಹಾಯಕಿ ಮಂಜುಶ್ರೀ, ‘ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರ ಗುತ್ತಿಗೆದಾರರಿಗೆ ಸರ್ಕಾರ ನೀಡುತ್ತಿರುವ ವೇತನ ಜೀವನ ನಿರ್ವಹಣೆಗೆ ಸಕಾಗುತ್ತಿಲ್ಲ. ಇದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.
ಆರ್.ರೇಖಾ, ‘ವರ್ಷಕ್ಕೆ ಕೇವಲ 10 ದಿನ ರಜೆ ಸೌಲಭ್ಯ ಕಲ್ಪಿಸಿ ಸರ್ಕಾರ ಗುತ್ತಿಗೆ ನೌಕರನ್ನು ವಂಚಿಸಿದೆ. ಯಾವುದೇ ವಿಶೇಷ ಭತ್ಯೆಯ ಸೌಲಭ್ಯ ಒದಗಿಸಿಲ್ಲ’ ಎಂದು ದೂರಿದರು.
ಪಲ್ಲವಿ, ‘ವಿಶೇಷ ಆರೋಗ್ಯ ಸೌಲಭ್ಯ ಒದಗಿಸಬೇಕು. ವೇತನ ತಾರತಮ್ಯವನ್ನು ಹೋಗಲಾಡಿಸಿ ಹೊರಗುತ್ತಿಗೆ ನೌಕರ ರನ್ನು ಸರ್ಕಾರಿ ನೌಕರರಂತೆ ಪರಿಗಣಿಸ ಬೇಕು’ ಎಂದು ಮನವಿ ಮಾಡಿದರು.
ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಧರಣಿ ನಿರತರು ಎಚ್ಚರಿಸಿದರು.