ನಾಯಕನಹಟ್ಟಿ: ರೈತರ ಹಿತಕ್ಕಾಗಿ ಸ್ಥಾಪಿತವಾಗಿರುವ ರೈತ ಉತ್ಪಾದಕ ಸಂಸ್ಥೆಗಳ ಬೆಳವಣಿಗೆಗೆ ರೈತರ ಸಹಕಾರ ಅಗತ್ಯ ಎಂದು ಚಿತ್ರದುರ್ಗ ಮೈರಾಡ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸಿ.ಎಸ್. ಗೌಡ ಹೇಳಿದರು.
ಪಟ್ಟಣದ ಮೈರಾಡ ಸಂಸ್ಥೆಯಲ್ಲಿ ಸೋಮವಾರ ನಡೆದ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಸ್ಥಳಿಯವಾಗಿ ಮಾರುಕಟ್ಟೆ ದೊರಕಿಸುವುದು ಮತ್ತು ದಲ್ಲಾಳಿಗಳು, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಲು ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಲಾಗಿದೆ. ಇವುಗಳಲ್ಲಿ ಯಾವುದೇ ರಾಜಕಾರಣಿಗಳು, ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ. ರೈತರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಅರ್ಥಮಾಡಿಕೊಂಡು ಸಹಕಾರ ನೀಡಬೇಕು. 1 ಸಾವಿರ ರೈತರು ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಹೆಚ್ಚಿನ ರೈತರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆನರಾಬ್ಯಾಂಕ್ ಕೃಷಿ ವಿಸ್ತರಣಾಧಿಕಾರಿ ಕೆ.ಎಸ್. ಸಂತೋಷ್, ‘ಕೆನರಾ ಬ್ಯಾಂಕ್ನಿಂದ ರೈತರಿಗೆ ಹಲವು ಸಾಲ ಸೌಲಭ್ಯಗಳನ್ನು ನೀಡಲಿದೆ. ರೈತರು ದಾಖಲೆಗಳನ್ನು ಒದಗಿಸಿ ಸಾಲ ಸೌಲಭ್ಯ ಪಡೆಯಬಹುದು’ಎಂದರು.
ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸಿ. ಮಂಜನಾಥ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಸವರಾಜ, ರಾಮಾಂಜನೇಯ, ಆನಂದಮ್ಮ, ಬಿ.ಟಿ. ಪ್ರಕಾಶ್, ಓಬಣ್ಣ, ರಾಜಣ್ಣ, ಚಾಮರಾಜನಾಯಕ, ಮರುಳಪ್ಪ, ಮೈರಾಡ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಅಶೋಕ್ ವೈ. ಹಗೇದಾಳ್, ಲಕ್ಷ್ಮೀ, ಕೃಷಿ ಅಧಿಕಾರಿ ಎಂ.ಎಸ್. ಶ್ರೀನಿವಾಸ್ ಇದ್ದರು.