ಹೊಸದುರ್ಗ: ರಾಗಿ ಖರೀದಿಗಾಗಿ 15 ದಿನಗಳಿಂದ ಪ್ರತಿಭಟನೆನಡೆಸುತ್ತಿರುವ ರೈತರು ಗುರುವಾರ ಪಟ್ಟಣದ ಎಲ್ಲಾ ಬ್ಯಾಂಕ್ಗಳಿಗೆ ಭೇಟಿ ನೀಡಿ, ರೈತರ ಸಾಲದ ಬದಲಿಗೆ ಬೆಳೆ ಪಡೆದು ಸಾಲ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
‘ನಮ್ಮ ಸಾಲದ ಮೊತ್ತಕ್ಕೆ ಬದಲಾಗಿ ನಾವು ಬೆಳೆದ ಬೆಲೆ ಖರೀದಿಸಿ, ರಶೀದಿ ನೀಡಿ, ಸಾಲ ಮರುಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಬಳಿಕಬೆಸ್ಕಾಂ ಕಚೇರಿಗೆ ತೆರಳಿ ಕರೆಂಟ್ ಬಿಲ್ ಬದಲಿಗೆ ಬೆಳೆ ಪಡೆದು, ರಶೀದಿ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲಾ ಬ್ಯಾಂಕ್ಗಳ ವ್ಯವಸ್ಥಾಪಕರು ಹಾಗೂ ಬೆಸ್ಕಾಂ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಖನಿಜ ನಿಗಮ ಮಂಡಳಿ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ‘ರೈತರ ಪ್ರತಿಭಟನೆ ಬಗ್ಗೆ ವರಿಷ್ಠರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ರೈತ ಮಹಿಳೆ ಮಂಜಮ್ಮ ಕೊರಟಿಕೆರೆ ಮಾತನಾಡಿ, ‘ಶ್ರಮಜೀವಿ ರೈತರ ಕಷ್ಟ ಪಟ್ಟು ಬೆಳೆದ ಬೆಲೆಗೆ ಒಂದೇ ಬೆಲೆ ನಿಗದಿಯಾಗಬೇಕು. ಸರ್ಕಾರ ಉತ್ತಮ ಬೆಲೆ ನೀಡದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗಲಿದೆ’ ಎಂದರು.
ರೈತ ಸಂಘದರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ತಾಲ್ಲೂಕು ಅಧ್ಯಕ್ಷ ಮಹೇಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ಬೋರೇಶ್, ನಾಗಲಿಂಗ ಮೂರ್ತಿ, ರಘು ನೀರಗುಂದ ರಮೇಶ, ತಿಮ್ಮೇಶ್ ಮಳಲಿ ಹಾಗೂ ರೈತರು ಭಾಗವಹಿಸಿದ್ದರು.