ಹೊಸದುರ್ಗ: ‘ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ಪಟ್ಟಣದ ವಿವಿಧ ಕಾಲೇಜು, ಹಾಸ್ಟೆಲ್ಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದೆ. ಶಾಲೆ– ಕಾಲೇಜು ವಿದ್ಯಾರ್ಥಿನಿಯರು ಯಾರಿಂದಲಾದರೂ ತೊಂದರೆ ಅನುಭವಿಸುತ್ತಿದ್ದರೆ ಮುಕ್ತವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಬೇಕು’ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಹೇಳಿದರು.
ಪಟ್ಟಣದ ವಿವಿಧ ಕಾಲೇಜು, ಹಾಸ್ಟೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಮಾತನಾಡಿದರು.
ವಾರದಿಂದ ಒಬ್ಬರು ಸಬ್ಇನ್ಸ್ಪೆಕ್ಟರ್ ಒಳಗೊಂಡ ಪೊಲೀಸ್ ಸಿಬ್ಬಂದಿ ತಂಡ ನಿತ್ಯವೂ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ನಿಜಲಿಂಗಪ್ಪ ಕಾಲೇಜು ಸೇರಿದಂತೆ ಇನ್ನಿತರ ಶಾಲೆ ಕಾಲೇಜುಗಳ ಸಮೀಪ ತರಗತಿಗಳು ಪ್ರಾರಂಭವಾಗುವುದಕ್ಕೂ ಮುನ್ನ ಮತ್ತು ನಂತರ ತೆರಳಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
‘ಕಾಲೇಜುಗಳು, ಹಾಸ್ಟೆಲ್ಗಳ ಆವರಣದ ಸಮೀಪ ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳು ಕೀಟಲೆ ಮಾಡುವುದು, ಚುಡಾಯಿಸುವುದು ಮತ್ತು ಅನುಮಾನಾಸ್ಪದವಾಗಿ ಓಡಾಡಿದರೆ, ಅಂತವರ ಮೇಲೆ ನಿಗಾ ಇರಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಜರುಗಿಸಲಾಗುವುದು. ಈಗಾಗಲೇ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಅಂತವರ ಬಗ್ಗೆ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.