ಚಿತ್ರದುರ್ಗ: ಕಾರ್ಮಿಕ ಕಾನೂನು ತಿದ್ದುಪಡಿ ನೆಪದಲ್ಲಿ ಕಾರ್ಮಿಕರ ಎಲ್ಲ ಹಕ್ಕುಗಳನ್ನು ನಾಶಮಾಡಲು ಸರ್ಕಾರ ಮುಂದಾಗಿದೆ. ಅನ್ಯಾಯದ ವಿರುದ್ಧ ನಡೆಸುವ ಪ್ರತಿಭಟನೆಯ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ ದೂರಿದರು.
ಕಾರ್ಮಿಕ ದಿನಾಚರಣೆ ಅಂಗವಾಗಿ ಭಗತ್ಸಿಂಗ್ ಉದ್ಯಾನದ ಸಮೀಪ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗುತ್ತಿಗೆ ಪದ್ಧತಿ ಹೆಚ್ಚಾಗುತ್ತಿದೆ. ಕಾಯಂ ನೌಕರಿ ಇಲ್ಲವಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಇದು ನವೀನ ಕಾಲದ ಶೋಷಣೆಯಾಗಿದೆ. ಉದ್ಯೋಗ ಕಡಿತ ಮತ್ತು ದುಡಿಮೆಯ ಅವಧಿಯನ್ನು ಹೆಚ್ಚಿಸುವುದು ಸುಲಭವಾಗಿ ನಡೆಯುತ್ತಿದೆ. ಉದ್ಯೋಗದ ಅಭದ್ರತೆ, ಬೆಲೆ ಏರಿಕೆ, ದುಬಾರಿಯಾದ ಆರೋಗ್ಯ ಮತ್ತು ಶಿಕ್ಷಣ ಸೇವೆ ಜನಸಾಮಾನ್ಯರನ್ನು ದುರ್ಬಲಗೊಳಿಸಿವೆ’ ಎಂದರು.
‘ರೈಲ್ವೆ ಖಾಸಗೀಕರಣಗೊಳ್ಳುತ್ತಿದೆ. ಕಾರ್ಪೊರೇಟ್ ಶಕ್ತಿಗಳಿಗೆ ಬಿಡಿಗಾಸಿಗೆ ಮಾರಾಟ ಮಾಡಲಾಗುತ್ತಿದೆ. ಬಂಡವಾಳಶಾಹಿಗಳ ಬಳಿ ಸಂಪತ್ತು ಹೆಚ್ಚಾಗುತ್ತಿದೆ. ಮಧ್ಯಮವರ್ಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಕಿಡಿಕಾರಿದರು.
ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ಗಿರಿಜಮ್ಮ, ಸುಜಾತ, ಮಂಜುಳಾ, ಸುಮಾ, ಲಕ್ಷ್ಮಿ, ನಾಗವೇಣಿ, ಶಿವಲಿಂಗಪ್ಪ, ಲೋಕೇಶ್ ಇದ್ದರು.