ಹಿರಿಯೂರು:‘2009ರಲ್ಲಿ ಬಸವರಾಜ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸ ಜಲಾಶಯಕ್ಕೆ ತಾತ್ಕಾಲಿವಾಗಿ ಹಂಚಿಕೆ ಮಾಡಿದ್ದ 5 ಟಿಎಂಸಿ ಅಡಿ ನೀರನ್ನು ಶಾಶ್ವತವಾಗಿ ಹಂಚಿಕೆ ಮಾಡಿ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
‘2015 ರಲ್ಲಿ ಅಂದಿನ ಸರ್ಕಾರ ತುಮಕೂರು ಶಾಖಾ ಕಾಲುವೆ ಮೂಲಕ ವಾಣಿವಿಲಾಸಕ್ಕೆ 2 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದ್ದು, ಇಷ್ಟು ಪ್ರಮಾಣದ ನೀರು ಕುಡಿಯಲು ಮಾತ್ರ ಸಾಕಾಗುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳ ಉಳಿವಿಗೆ 5 ಟಿಎಂಸಿ ಅಡಿ ಹಂಚಿಕೆ ಮಾಡಿ ಆದೇಶ ಹೊರಡಿಸಬೇಕು’ ಎಂದು ಹೊರಕೇರಪ್ಪ ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹಿರಿಯೂರು ತಾಲ್ಲೂಕಿನ 15 ಹಾಗೂ ತುಮಕೂರು ಕಾಲುವೆ ಮೂಲಕ 17 ಕೆರೆಗಳನ್ನು ತುಂಬಿಸಬೇಕು. ಎತ್ತಿನಹೊಳೆ ಯೋಜನೆಯಿಂದ ವಾಣಿವಿಲಾಸ ಕ್ಕೆ 4 ಟಿಎಂಸಿ ಅಡಿ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.