ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರಾ ಮಹೋತ್ಸವ ಎಂಬ ಪ್ರತೀತಿಯನ್ನು ನಾಯಕನಹಟ್ಟಿ ಹೊಂದಿದೆ. ಒಂದು ವಾರ ಕಾಲ ಜಾತ್ರಾ ಮಹೋತ್ಸವ ಜರುಗಲಿದೆ.
ಮಹಾರಥೋತ್ಸವದ ಅಂಗವಾಗಿ ತಿಪ್ಪೇರುದ್ರಸ್ವಾಮಿ ದೇಗುಲದ ಒಳಮಠದಲ್ಲಿ ಬೆಳಿಗ್ಗೆಯಿಂದ ಪೂಜಾ ಕೈಂಕರ್ಯ ನಡೆದವು. ಜಾತ್ರೆಗೆ ಬಂದ ಭಕ್ತರು ದೇಗುಲದ ಮುಂಭಾಗದಲ್ಲಿ ಒಣ ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು. ಕೊಬ್ಬರಿ ಸುಟ್ಟ ಹೊಗೆ ಮುಗಿಲೆತ್ತರಕ್ಕೆ ವಿಸ್ತರಿಸಿತ್ತು.
ಮಧ್ಯಾಹ್ನ 2.30ಕ್ಕೆ ಉತ್ಸವ ಮೂರ್ತಿಯನ್ನು ದೇಗುಲದಿಂದ ರಥದ ಬಳಿಗೆ ಕೊಂಡೊಯ್ಯಲಾಯಿತು. ರಥೋತ್ಸವಕ್ಕೊ ಮೊದಲು ಮುಕ್ತಿ ಬಾವುಟವನ್ನು ಹರಾಜು ಹಾಕಲಾಯಿತು. ವೀರಭದ್ರ ಬಾಬು ಅವರು ₹ 26 ಲಕ್ಷಕ್ಕೆ ಬಾವುಟ ಖರೀದಿಸಿದರು. 2019 ಮತ್ತು 2018 ರಲ್ಲಿ ₹ 72 ಲಕ್ಷಕ್ಕೆ ಖರೀದಿಸಲಾಗಿತ್ತು. ಹರಾಜು ಪ್ರಕ್ರಿಯೆ ಮುಗಿದ ಬಳಿಕ ಬಾವುಟವನ್ನು ರಥಕ್ಕೆ ಕಟ್ಟಿ ಚಾಲನೆ ನೀಡಲಾಯಿತು.
ರಥದ ಮುಕ್ತಿ ಬಾವುಟ ಪಡೆದರೆ ಆರೋಗ್ಯ, ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಉದ್ಯಮಿಗಳು, ರಾಜಕಾರಣಿಗಳು ಬಾವುಟ ಪಡೆಯಲು ಪೈಪೋಟಿ ನಡೆಸುತ್ತಾರೆ.
ಜಾತ್ರಾ ಮಹೋತ್ಸವದ ಮೇಲೆ 'ಕೋವಿಡ್ - 19' ರ ಭೀತಿ ಆವರಿಸಿದೆ. ಮಾಸ್ಕ್ ಧರಿಸಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವು ಭಕ್ತರು ಮುಖಗವಸು ಧರಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸಂಸದ ಎ. ನಾರಾಯಣಸ್ವಾಮಿ, ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಇದ್ದರು.