ಚಿತ್ರದುರ್ಗ: ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 53ನೇ ಜನ್ಮದಿನದ ಅಂಗವಾಗಿ ಎರಡು ದಿನದ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಶಿಬಿರವನ್ನು ಹೊಸದುರ್ಗ ತಾಲ್ಲೂಕಿನ ಮಧುರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
‘ಸ್ವಾಮೀಜಿ ಅವರು 53ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದರ ಅಂಗವಾಗಿ ನ.28 ಮತ್ತು 29ರಂದು ಶಿಬಿರ ಹಮ್ಮಿಕೊಳ್ಳಲಾಗಿದೆ. ಭಾರತೀಯ ಸಂಸ್ಕೃತಿ ಉಳಿಸಿ, ಆರೋಗ್ಯಪೂರ್ಣ ಸಮಾಜವನ್ನು ಕಟ್ಟಲು ಈ ಶಿಬಿರ ಸಹಕಾರಿಯಾಗಲಿದೆ’ ಎಂದು ಭಗೀರಥ ಸಮಾಜದ ಗೌರವಾಧ್ಯಕ್ಷ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ರವೀಂದ್ರನಾಥ್, ಮಾಜಿ ಶಾಸಕ ವೈ.ಎಸ್. ದತ್ತ, ಪೋಲಿಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಉಪನ್ಯಾಸ ನೀಡಲಿದ್ದಾರೆ’ ಎಂದರು.
‘ಭಗೀರಥ ಗುರುಪೀಠದ ಇತಿಹಾಸ ಹಾಗೂ ಪರಂಪರೆ, ಉಪ್ಪಾರ ಸಮಾಜದ ಸಂಘಟನೆ, ಮೀಸಲಾತಿ ಆಯೋಗಗಳ ವರದಿಗಳು ಹಾಗೂ ಇತ್ತೀಚಿನ ಗೊಂದಲಗಳ ಬಗ್ಗೆ ಉಪನ್ಯಾಸ ಇರಲಿದೆ. ಉಪ್ಪಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ತಿಳಿಸಿಕೂಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಶಿಬಿರಕ್ಕೆ ಸಾವಿರ ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
ಸಮುದಾಯದ ಮುಖಂಡರಾದ ರಾಜಣ್ಣ, ಚಳ್ಳಕೆರೆ ಹನುಮಂತಪ್ಪ, ಉಪಾಧ್ಯಕ್ಷ ವೀರೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಯುವ ಘಟಕದ ಅಜ್ಜಪ್ಪ, ತಿಮ್ಮಣ್ಣ, ಬಸವರಾಜ್, ವೆಂಕಟೇಶ್ ಇದ್ದರು.