ಚಳ್ಳಕೆರೆ: ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ವೈದ್ಯರಿಗೆ ಸಲಹೆ ನೀಡಿದರು. ಲಯನ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿರುವ ₹12 ಲಕ್ಷ ಮೌಲ್ಯದ ಡಯಾಲಿಸಿಸ್ ಯಂತ್ರಕ್ಕೆ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವ ಯಂತ್ರೋಪಕರಣಗಳ ಖರೀದಿಗೆ ಸರ್ಕಾರದ ಜತೆಗೆ ಸಂಘಸಂಸ್ಥೆಗಳೂ ಆರ್ಥಿಕ ನೆರವು ಒದಗಿಸಿವೆ. ದಾನಿಗಳು ನೀಡಿದ ಯಂತ್ರಗಳನ್ನು ಮೂಲೆಗುಂಪು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಡಯಾಲಿಸಿಸ್ ಯಂತ್ರ ಸ್ಥಗಿತಗೊಂಡರೆ, ಅದನ್ನು ತಕ್ಷಣ ಗಮನಕ್ಕೆ ತಂದಲ್ಲಿ ಕೂಡಲೇ ದುರಸ್ತಿ ಮಾಡಿಸಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಬಡ ರೋಗಿಗಳ ಚಿಕಿತ್ಸೆಗೆ ₹12 ಲಕ್ಷ ಮೌಲ್ಯದ ಡಯಾಲಿಸಿಸ್ ಯಂತ್ರವನ್ನು ಉಚಿತವಾಗಿ ನೀಡಿರುವ ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಆಡಳಿತಾಧಿಕಾರಿ ವೆಂಕಟೇಶ್ ಹೇಳಿದರು. ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ರೋಗಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಜಿಲ್ಲಾ ಅಧ್ಯಕ್ಷ ಎಂ.ಕೆ.ಭಟ್, ತಾಲ್ಲೂಕು ಅಧ್ಯಕ್ಷ ಕೆ.ಮುರಳಿ ಮಾತನಾಡಿದರು. ಲಯನ್ಸ್ ಸಂಸ್ಥೆ ತಾಲ್ಲೂಕು ಸದಸ್ಯ ಮಹ್ಮದ್ ಆಲಿ, ಎಂಜಿನಿಯರ್ ರವಿ, ಸಿದ್ಧಾರ್ಥ, ಆರೋಗ್ಯಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ ಇದ್ದರು.