ಶ್ರೀರಾಂಪುರ: ಯುವತಿಯನ್ನು ಮಾತನಾಡಿಸಿದ ವಿಚಾರವಾಗಿ ಯುವಕನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಸಮೀಪದ ನಾಗನಾಯಕನಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಗ್ರಾಮದ ಮನೋಜ್ (22) ಹತ್ಯೆಯಾದ ಯುವಕ. ಆರೋಪಿಗಳಾದ ಇಂದಿರಾಬಾಯಿ, ಸುಮಿತ್ರಬಾಯಿ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಘಟನೆಯ ಪ್ರಮುಖ ಆರೋಪಿ ರಘುನಾಯ್ಕ ತಲೆಮರೆಸಿಕೊಂಡಿದ್ದಾನೆ.
ಹಿರಿಯೂರು ತಾಲ್ಲೂಕಿನ ಸೋಮೇನಹಳ್ಳಿ ತಾಂಡಾದ ರಘುನಾಯ್ಕನ ಸಂಬಂಧಿ ನಾಗನಾಯಕನಕಟ್ಟೆ ಗ್ರಾಮದ ಯುವತಿಯನ್ನು ಮನೋಜ್ ಮಾತನಾಡಿಸುತ್ತಿದ್ದ ಎನ್ನುವ ಕಾರಣಕ್ಕೆ ಇಬ್ಬರ ಗಲಾಟೆ ನಡೆದಿತ್ತು. ಈ ದ್ವೇಷ ಹತ್ಯೆಗೆ ಕಾರಣ ಎನ್ನಲಾಗಿದೆ. ಗುರುವಾರ ರಾತ್ರಿ ಗ್ರಾಮಕ್ಕೆ ಬಂದಿದ್ದ ರಘುನಾಯ್ಕ ಹಾಗೂ ಇತರರು ಸೇರಿ ಮನೋಜ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡು ನರಳುತ್ತಿದ್ದ ಮನೋಜ್ನನ್ನು ಗ್ರಾಮಸ್ಥರು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಧರ್ಮೇಂದ್ರಕುಮಾರ್ ಮೀನ, ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಚೈತ್ರಾ, ಶ್ರೀರಾಂಪುರ ಠಾಣೆ ಇನ್ಸ್ಪೆಕ್ಟರ್ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದರು.