ಚಿತ್ರದುರ್ಗ: ನಾಗರಿಕತೆಯತ್ತ ಓಡುತ್ತಿರುವ ಮಾನವ ಸಂಸ್ಕೃತಿಯ ಕಡೆಗೆ ಆಮೆಗತಿಯಲ್ಲಿ ಸಾಗುತ್ತಿದ್ದಾನೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಬೇಸರಿಸಿದರು.
ನಗರದ ಧವಳಗಿರಿ ಬಡಾವಣೆಯ ಇನ್ನರ್ ವ್ಹೀಲ್ ಭವನದಲ್ಲಿ ಶನಿವಾರ ನಡೆದ ‘ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ‘ಸಾಂಸ್ಕೃತಿಕ ಪ್ರಜ್ಞೆ’ ಕುರಿತು ಮಾತನಾಡಿದರು. ‘ಸಾಂಸ್ಕೃತಿಕ ಪ್ರಜ್ಞೆಯ ಮೂಲ ಸಂಸ್ಕೃತಿಯಾಗಿದೆ. ಇದರಿಂದ ದೂರ ಸರಿಯುತ್ತಿರುವ ಮನುಷ್ಯನಿಗೆ ಆಧ್ಯಾತ್ಮಿಕ ಚಿಂತನೆ ಬೇಕು. ಯೋಗ ಧ್ಯಾನಕ್ಕೆ ಸಮ. ಶಿವಯೋಗದಿಂದ ಬದುಕು ಆರೋಗ್ಯಪೂರ್ಣವಾಗುತ್ತದೆ. ಇದರಿಂದ ಅತಿಯಾದ ಆತಂಕ ಕಡಿಮೆಯಾಗುತ್ತದೆ’ ಎಂದು ಹೇಳಿದರು.
ಹೊಸದುರ್ಗ ಕುಂಚಿಟಿಗ ಗುರುಪೀಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ, ‘ಶಿಲಾಯುಗದಿಂದಲೇ ಸಾಂಸ್ಕೃತಿಕ ಪ್ರಜ್ಞೆ ಆರಂಭವಾಗಿದೆ. ಆಧುನಿಕ ಭರಾಟೆಯಲ್ಲಿ ಉತ್ತಮ ಆಲೋಚನೆಗಳು ಬರಡಾಗಿವೆ. ದೇವಸ್ಥಾನಗಳಲ್ಲಿ ಗಂಟೆಯ ಶಬ್ದ ಕೇಳುತ್ತಿದ್ದವರು ಕಂಪ್ಯೂಟರ್ ಗಂಟೆ ಕೇಳುವ ಸ್ಥಿತಿ ಬಂದಿದೆ. ಎಲ್ಲರ ಬದುಕು ಪ್ಲಾಸ್ಟಿಕ್ಮಯವಾಗಿದೆ’ ಎಂದರು.
‘ಸಾಂಸ್ಕೃತಿಕ ವ್ಯವಸ್ಥೆ ಇಲ್ಲದೇ ಹೋದರೆ ನಾವು ಬದುಕುವುದು ಕಷ್ಟವಾಗುತ್ತದೆ. ಅತಿಯಾದ ನಾಗರಿಕತೆ ದೇಶವನ್ನು ಸರ್ವನಾಶ ಮಾಡುತ್ತದೆ. ಅತಿಯಾದ ಸುಖ ದುಃಖದಲ್ಲಿ ಮುಕ್ತಾಯವಾಗುತ್ತದೆ’ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಹುರಳಿ ಎಂ.ಬಸವರಾಜ್ ಮಾತನಾಡಿ, ‘ಬಹಿರಂಗದ ಆಚರಣೆಗಳಲ್ಲಿ ಬದುಕು ಕೊಚ್ಚಿ ಹೋಗುತ್ತಿದೆ. ಭವ್ಯ ಭಾರತದ ಪರಂಪರೆ ನಮಗೆ ಸಾಂಸ್ಕೃತಿಕ ಪ್ರಜ್ಞೆಯಾಗಬೇಕು. ನಾವು ಆರ್ಥಿಕವಾಗಿ ಸಬಲತೆ ಸಾಧಿಸುವ ಮೂಲಕ ಸಾಮಾಜಿಕವಾಗಿ ಪ್ರಬಲರಾಗಬೇಕು’ ಎಂದರು.
ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಮಾಲಾ ನಾಗರಾಜ್, ರೋಟರಿ ಕ್ಲಬ್ ವಿಂಡ್ಮಿಲ್ ಸಿಟಿ ಅಧ್ಯಕ್ಷೆ ನಾಗರತ್ನ ವಿಶ್ವನಾಥಯ್ಯ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಅರುಣ್ ಕುಮಾರ್, ಗಾಯತ್ರಿ ಶಿವರಾಂ, ಶೈಲಾ ಜಯಕುಮಾರ್ ಇದ್ದರು .