ಚಿತ್ರದುರ್ಗ: ‘ಬದುಕನ್ನು ಕಟ್ಟಿಕೊಳ್ಳಲು ಹಣ, ಶ್ರೀಮಂತಿಕೆಯೇ ಮುಖ್ಯವಲ್ಲ. ಪರೋಪಕಾರ ಗುಣ ಅಳವಡಿಸಿಕೊಂಡು, ಮೌಲ್ಯಯುತ ಜೀವನ ಸಾಗಿಸುವ ಮೂಲಕ ಹೃದಯವಂತರಾಗಬೇಕು’ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ಮುರುಘಾಮಠ, ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ನಡೆದ 30ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಮಾತನಾಡಿದರು.
‘ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಿದ ಕೀರ್ತಿ ಗ್ರಾಮೀಣ ಪ್ರದೇಶದ ಜನರಿಗೆ ಸಲ್ಲುತ್ತದೆ. ಸೌಂದರ್ಯ ಶಾಶ್ವತವಲ್ಲ. ಆದ್ದರಿಂದ ಪ್ರತಿಯೊಬ್ಬರೂ ಬದುಕಿನಲ್ಲಿ ಬಾಹ್ಯ ಶೃಂಗಾರಕ್ಕಿಂತಲೂ ಅಂತರಂಗವನ್ನು ಶೃಂಗರಿಸಿಕೊಳ್ಳಲು ಮುಂದಾಗಬೇಕು.ಪ್ರೇರಣೆ ಉಜ್ವಲ ವಾದ ಬದುಕನ್ನು ಕಟ್ಟಿಕೊಡುತ್ತದೆ. ಬಸವಣ್ಣ ಅವರಿಗೂ ಶರಣ-ಶರಣೆಯರ ಪ್ರೇರಣೆಯಾಯಿತು. ಗುಡ್ಡಾಪುರದ ಶರಣೆ ದಾನಮ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಅನ್ನದಾಸೋಹ ನೆರವೇರಿಸುತ್ತ ಪ್ರೇರಣೆಯಾಗಿದ್ದಾರೆ. ಈ ಕಾರಣಕ್ಕಾಗಿ 12ನೇ ಶತಮಾನದ ಬಸವಾದಿ ಪ್ರಮಥರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ’ ಎಂದರು.
ಸನ್ಮಾನ ಸ್ವೀಕರಿಸಿದ ಕೆಆರ್ಐಡಿಎಲ್ ನಿಗಮದ ಅಧ್ಯಕ್ಷ ಎಂ. ರುದ್ರೇಶ್, ‘ಮುರುಘಾಮಠದ ಹಲವು ಜನಪರ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಿವೆ. ನಾವು ಎಷ್ಟೇ ದುಡಿದು, ಶ್ರೀಮಂತರಾದರೂ ಇನ್ನೊಬ್ಬರ ಹಸಿವಿಗೆ ಸ್ಪಂದಿಸಬೇಕು. ದೇಶದ ರಕ್ಷಣೆಗೆ ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.
ಕನಕಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ ಇದ್ದರು. 2 ಜೋಡಿ ಅಂತರ್ಜಾತಿ ಸೇರಿ ಒಟ್ಟು 12 ಜೋಡಿಗಳ ಕಲ್ಯಾಣ ನೆರವೇರಿತು.