ಹಿರಿಯೂರು: ತಾಲ್ಲೂಕಿನ ಸರಸ್ವತಿಹಟ್ಟಿಯ ಹೊಸಹಟ್ಟಿಯಲ್ಲಿ ಗುರುವಾರ ವಿಷಪೂರಿತ ಮೇವು ತಿಂದು 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಚಿತ್ತಪ್ಪ, ಕೆಂಚಪ್ಪ ಮತ್ತು ಶಿವಮ್ಮ ಎಂಬುವವರ ಸುಮಾರು 300 ಕುರಿಗಳು ವಿಷಪೂರಿತ ಮೇವು ತಿಂದಿವೆ. ಸುಮಾರು 258 ಕುರಿಗಳನ್ನು ಬದುಕಿಸುವಲ್ಲಿ ಪಶುವೈದ್ಯರು ಯಶಸ್ವಿಯಾಗಿದ್ದಾರೆ. ಇನ್ನೂ 25ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಗಂಭೀರವಾಗಿದೆ.
ತಹಶೀಲ್ದಾರ್ ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಗ್ರಾಮಾಂತರ ಠಾಣೆ ಎಸ್ಐ ಪರಮೇಶ್ ನೇತೃತ್ವದಲ್ಲಿ ಪಶು ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
‘ಬಿಳಿ ಜೋಳದ ಮೇವಿನ ಚಿಗುರು ತಿಂದು ಕುರಿಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದು, ಸಂತ್ರಸ್ತ ಕುರಿಗಾಯಿಗಳಿಗೆ ನೆರವು ನೀಡಲಾಗುವುದು. ಸರ್ಕಾರದಿಂದಲೂ ಪರಿಹಾರ ಕೊಡಿಸಲಾಗುವುದು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.