ಹಿರಿಯೂರು: ಭಕ್ತರು ತಮ್ಮ ಭಕ್ತಿಯನ್ನು ಭಗವಂತನಿಗೆ ಸಮರ್ಪಿಸಲು, ಒತ್ತಡಮುಕ್ತ ಬದುಕು ನಡೆಸಲು ಸಂಗೀತ ಸಹಕಾರಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾನ್ ಆರ್. ತಿಪ್ಪೇಸ್ವಾಮಿ ಹೇಳಿದರು.
ನಗರದ ಈಶ್ವರೀಯ ವಿದ್ಯಾಲಯದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಳವಿಭಾಗಿ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಂಗೀತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಈಚೆಗೆ ಸಹಜ ಬದುಕು ಎಂಬುದು ಅರ್ಥ ಕಳೆದುಕೊಂಡಿದೆ. ಎಲ್ಲ ವರ್ಗ, ಸಮುದಾಯದ ಜನ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಬದುಕುತ್ತಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಬಿಡುಗಡೆ ಪಡೆಯಲು ಯೋಗ, ಧ್ಯಾನ, ಸಂಗೀತದ ಅಭ್ಯಾಸ ಇದ್ದರೆ ಒಳಿತು. ಜಾತಿ–ಧರ್ಮ, ಗಡಿಗಳನ್ನು ಮೀರಿದ ವಿಶೇಷತೆ ಇವುಗಳಿಗೆ ಇದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪುರಸ್ಕೃತ ಸಕ್ಕರ ರಂಗಸ್ವಾಮಿ, ‘ಸಂಗೀತಕ್ಕೆ ರಾಗ–ತಾಳಗಳು ಇಲ್ಲದ ಸಮಯದಲ್ಲಿ ಮಹರ್ಷಿ ಮಾತಂಗ ಮುನಿಗಳು ಸಂಗೀತಕ್ಕೆ ಹೊಸ ರಾಗ ಮತ್ತು ತಾಳಗಳನ್ನು ನೀಡಿದರು. ಅವುಗಳನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ, ಹಿಂದೂಸ್ತಾನಿ ಮತ್ತು ಪಾಶ್ಚಾತ್ಯ ಸಂಗೀತಗಳು ರೂಪುಗೊಂಡಿವೆ. ವಿಶ್ವದ 180 ರಾಷ್ಟ್ರಗಳಲ್ಲಿ ವಿಶ್ವ ಸಂಗೀತ ದಿನ ಆಚರಿಸಲಾಗುತ್ತಿದೆ’ ಎಂದರು.
ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಎನ್. ಜಗದಾಂಬ ಮತ್ತು ತಂಡದವರು ಸುಗಮ ಸಂಗೀತ, ನವೀನ್ ಕುಮಾರ್ ತಂಡದವರು ಕನ್ನಡ ಗೀತ ಗಾಯನ ಪ್ರಸ್ತುತ ಪಡಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಸ್ವಾಮಿ, ಜೆ. ನಿಜಲಿಂಗಪ್ಪ, ಎಂ. ರಮೇಶ್ ನಾಯ್ಕ್, ಎಂ.ಬಿ. ಲಿಂಗಪ್ಪ, ಜೆ. ಹನುಮಂತರೆಡ್ಡಿ, ಪಿ.ಎಂ. ತಿಪ್ಪೇಸ್ವಾಮಿ, ಎನ್. ಶಿವಲಿಂಗಪ್ಪ, ಅಭಿಷೇಕ್, ವೇದಪುಷ್ಪ, ಹೇಮಲತ, ವಿನುತ ಇದ್ದರು.