ಚಳ್ಳಕೆರೆ: ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ತಾಲ್ಲೂಕು ವೀರಶೈವ ಲಿಂಗಾಯತ ಸಂಘಟನೆಗಳ ತಾಲ್ಲೂಕು ಒಕ್ಕೂಟದ ಕಾರ್ಯಕರ್ತರು ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ರೇಹಾನ್ಪಾಷ ಅವರಿಗೆ ಮನವಿ ಸಲ್ಲಿಸಿದರು.
‘ವಿದ್ಯಾರ್ಥಿನಿ ನೇಹಾ ಅವರ ಅಮಾನುಷ ಹತ್ಯೆ ಖಂಡನೀಯವಾದುದು. ವಿದ್ಯಾರ್ಥಿನಿ ತಂದೆಯ ಹೇಳಿಕೆಯಂತೆ ಹತ್ಯೆ ಪ್ರಕರಣವನ್ನು ಕೂಡಲೇ ಸಿಬಿಸಿ ತನಿಖೆಗೆ ಒಪ್ಪಿಸಬೇಕು’ ಎಂದು ಮಹಿಳಾ ಸಂಘಟನೆ ಪ್ರತಿನಿಧಿ ಇಂದುಮತಿ ಆಗ್ರಹಿಸಿದರು.
‘ನೇಹಾ ಅವರ ಜೊತೆ ಆರೋಪಿ ಸಂಬಂಧ ಕಟ್ಟಿ ಸರ್ಕಾರದ ಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಯನ್ನು ಮಹಿಳಾ ಸಮಾಜ ಖಂಡಿಸುತ್ತದೆ. ವಿದ್ಯಾರ್ಥಿನಿ ಭೀಕರ ಹತ್ಯೆ ಘಟನೆಯಿಂದ ನಾಡಿನ ಶಾಲಾ– ಕಾಲೇಜು ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ. ಆರೋಪಿಗೆ ಶಿಕ್ಷೆ ವಿಧಿಸಬೇಕು’ ಎಂದು ಕೆ.ಪಿ.ಲೋಕೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಾತೃಶ್ರೀ ಮಂಜುನಾಥ್, ಸಂಘಟನೆ ಮುಖಂಡ ಪ್ರಸನ್ನಕುಮಾರ್, ಪುರಸಭೆ ಮಾಜಿ ಸದಸ್ಯ ಎಚ್.ವಿ.ಪ್ರಸನ್ನಕುಮಾರ್, ನೆಡಗಲ್ ಶಂಕರ್, ಹೊಸಮನೆ ನಾಗರಾಜ, ಹೊಟ್ಟೆಪ್ಪನಹಳ್ಳಿ ಪ್ರಸನ್ನ, ನಾಗರಾಜಪ್ಪ, ವಾಸು, ಪದ್ಮಾವತಿ, ಶಶಿಕಲಾ, ಅನ್ನಪೂರ್ಣೆಶ್ವರಿ, ಮಂಜುಳಾ, ಸಿದ್ದಪ್ಪ, ಮಂಜುನಾಥ್, ತಿಪ್ಪೇಸ್ವಾಮಿ ಇದ್ದರು.