ಮೊಳಕಾಲ್ಮುರು: ಕೊಳಚೆ ನಿರ್ಮೂಲನಾ ಮಂಡಳಿಯು ವಸತಿ ಯೋಜನೆ ಅಡಿ ಮನೆಗಳನ್ನು ಶೀಘ್ರ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅಂದಾಜು 500 ಮನೆಗಳು ಮಂಜೂರಾಗಿದ್ದು, ಕಾಮಗಾರಿಯು ಆಮೆ ವೇಗದಲ್ಲಿ ಸಾಗಿದೆ. ಫಲಾನುಭವಿಗಳಿಂದ ವಂತಿಕೆ ಹಣವನ್ನು ಕಟ್ಟಿಸಿಕೊಂಡು ಸತಾಯಿಸುತ್ತಿರುವುದು ಸರಿಯಲ್ಲ. ಇದರಿಂದ ಫಲಾನುಭವಿಗಳಿಗೆ ದಿಕ್ಕು ತೋಚದಂತಾಗಿದೆ ಎಂದು ದೂರಿದರು.
ನಿರ್ಮಾಣ ಹಂತದಲ್ಲಿರುವ ಮನೆಗಳು ಕಳಪೆಯಿಂದ ಕೂಡಿರುವ ಬಗ್ಗೆ ಹಲವು ಸಲ ದೂರಿದರೂ ಸಮಸ್ಯೆ ಮುಂದುವರಿದಿದೆ. ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಟಿ. ರವಿಕುಮಾರ್, ‘ಈ ಬಗ್ಗೆ ಮುಖ್ಯಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.