ಚಳ್ಳಕೆರೆ: ತಾಲ್ಲೂಕಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಯ ಪರಿಣಾಮ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ 8 ಮನೆಗಳು ಭಾಗಶಃ ಕುಸಿದಿದ್ದು, ₹ 4 ಲಕ್ಷನಷ್ಟ ಉಂಟಾಗಿದೆ.
ಗಡಿ ಭಾಗದ ಜಾಜೂರು ಗ್ರಾಮದ ರೈತ ಶ್ರೀನಿವಾಸಗೌಡ ಅವರು 3 ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಪಪ್ಪಾಯ ಬೆಳೆ ಹಾನಿಗೀಡಾಗಿದೆ. ಈ ಮೂಲಕ ತಾಲ್ಲೂಕಿನಲ್ಲಿ ಒಟ್ಟು ₹ 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮನೆಗೆ ನುಗ್ಗಿದ ಹಳ್ಳದ ನೀರು: ಜಾಜೂರು ಗ್ರಾಮದ ಎ.ಕೆ.ಕಾಲೊನಿ ಬಳಿ ಮಳೆ ನೀರು ಹರಿದು ಹೋಗುವ ಹಳ್ಳದ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದು, ಹಳ್ಳದ ನೀರು ಮನೆಗೆ ನುಗ್ಗಿ ಮನೆಯಲ್ಲಿನ ದವಸ-ಧಾನ್ಯ, ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನಿರಾಶ್ರಿತ ಕುಟುಂಬಗಳು ರಾತ್ರೋ ರಾತ್ರಿ ಬೇರೆಡೆಗೆ ಸ್ಥಳಾಂತರಗೊಂಡಿವೆ.
ಮಹಿಳಾ ಸಂಘದ ಪ್ರತಿನಿಧಿ ಲಕ್ಷ್ಮಮ್ಮ ಅವರು ಹಳ್ಳದ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಮನೆ ಕಟ್ಟಡವನ್ನು ತೆರವುಗೊಳಿಸಬೇಕು. ಮಳೆನೀರು ವೇದಾವತಿ ನದಿಗೆ ಹರಿದು ಹೋಗಲು ಹಳ್ಳದ ಜಾಗದಲ್ಲಿ ದೊಡ್ಡ ಕಾಲುವೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ತಿಮ್ಮಣ್ಣ ಆಗ್ರಹಿಸಿದರು.
ಹಳ್ಳದ ನೀರು ಮನೆಗೆ ಏಕಾಏಕಿ ನುಗ್ಗಿದ್ದರಿಂದ ಇಡೀ ರಾತ್ರಿ ನಿದ್ದೆಗೆಟ್ಟು ಕೂರಬೇಕಾಯಿತು. ಮನೆಯಲ್ಲಿದ್ದ ವಸ್ತುಗಳು ನಾಶವಾಗಿ ತೀವ್ರ ನಷ್ಟ ಉಂಟಾಗಿದೆ ಎಂದು ಮಹಿಳೆ ನಾಗಮ್ಮ ಅಳಲು ತೋಡಿಕೊಂಡರು.
ಮಳೆ ವರದಿ: ತಾಲ್ಲೂಕಿನ ತಳಕು 51.2, ನಾಯಕನಹಟ್ಟಿ ಹೋಬಳಿ 65.6, ಪರಶುರಾಂಪು ಹೋಬಳಿ 36.4, ದೇವರಮರಿಕುಂಟೆ 41.2, ಹಾಗೂ ಚಳ್ಳಕೆರೆ ಕಸಬಾ ಹೋಬಳಿಯಲ್ಲಿ 50.0 ಮಿಲಿ ಮೀಟರ್ ಮಳೆಯಾಗಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.
ಚಳ್ಳಕೆರೆ : ತಾಲ್ಲೂಕಿನ ಜಾಜೂರು ಗ್ರಾಮದ ಎ.ಕೆ.ಕಾಲೋನಿ ಬಳಿ ಮಳೆನೀರು ಹರಿದು ಹೋಗುತ್ತಿದ್ದ ಹಳ್ಳದ ಪ್ರದೇಶದಲ್ಲಿ ಮನೆ ನಿರ್ಮಾಣದ ಅಕ್ರಮ ಕಟ್ಟಡ ನಿರ್ಮಿಸಿದ್ದರಿಂದ ಶುಕ್ರವಾರ ತಡರಾತ್ರಿ 20. ಮನೆಗೆ ಹಳ್ಳದ ನೀರು ನುಗ್ಗಿ ಮನೆಯಲ್ಲಿನ ದವಸ-ಧಾನ್ಯ ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.