ಚಿತ್ರದುರ್ಗ: ಸಮವಸ್ತ್ರದಲ್ಲೇ ಮದ್ಯ ಸೇವಿಸಿ ಶಿಸ್ತು ಉಲ್ಲಂಘಿಸಿದ್ದ, ಗ್ರಾಮಾಂತರ ಠಾಣೆಯ ಕಾನ್ಸ್ಟೆಬಲ್ ರಾಜು ಚವ್ಹಾಣ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ನಿವೃತ್ತ ಯೋಧರಾಗಿದ್ದ ರಾಜು ಮೂರು ವರ್ಷಗಳ ಹಿಂದೆ ಪೊಲೀಸ್ ಇಲಾಖೆ ಸೇರಿದ್ದರು.
ತಾಲ್ಲೂಕಿನ ಪಲ್ಲವಗೆರೆ ಗ್ರಾಮದ ಜಮೀನಿನಲ್ಲಿ ಸ್ನೇಹಿತರ ಜತೆ ಮದ್ಯ ಸೇವಿಸಿದ್ದರು. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿತ್ತು. ಸತ್ಯಾಸತ್ಯತೆ ಪರಿಶೀಲನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಆದೇಶಿಸಿದ್ದರು.
‘ಸಮವಸ್ತ್ರದಲ್ಲೇ ಮದ್ಯ ಸೇವಿಸಿದ್ದು ದೃಢಪಟ್ಟಿದೆ. ಆಗ ಕರ್ತವ್ಯದಲ್ಲಿ ಇದ್ದರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿಸಲಾಗುತ್ತದೆ. ಶಿಸ್ತು ಉಲ್ಲಂಘನೆಗಾಗಿ ಈಗ ಅಮಾನತು ಮಾಡಲಾಗಿದೆ’ ಎಂದು ರಾಧಿಕಾ ತಿಳಿಸಿದ್ದಾರೆ.