ಹೊಸದುರ್ಗ: ಬುಧವಾರ ಸಂಜೆ ಸುರಿದ ಬಿರುಗಾಳಿ, ಮಳೆಗೆ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಸಣ್ಣಕಿಟ್ಟದಹಳ್ಳಿ ಗೊಲ್ಲರಹಟ್ಟಿಯ ರೈತ ನಾಗಪ್ಪ ಅವರ ಮನೆಯ ಶೀಟು ಗಾಳಿಗೆ ಹಾರಿಹೋಗಿವೆ.
ಬಿರುಗಾಳಿಗೆ ಮನೆ ಚಾವಣಿಯ ಸಿಮೆಂಟ್ ಶೀಟಿನ ತುಂಡು, ಮರದ ಸಾಮಗ್ರಿ, ಕಬ್ಬಿಣದ ಆಂಗ್ಲರ್ ಕಳಚಿ ಬಿದ್ದಿದ್ದರಿಂದ ನಾಗಪ್ಪ ಅವರ ಮನೆಯೊಳಗಿದ್ದ ಅವರ ತಾಯಿ ವೃದ್ಧೆ ಈರಜ್ಜಿ, ನಾದಿನಿ ಯಶೋದಮ್ಮ ಅವರಿಗೆ ಗಾಯವಾಗಿದೆ. ಅವರಿಗೆ ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.
ಮಳೆಗೆ ಮನೆಯೊಳಗಿದ್ದ 20 ಶೇಂಗಾ ಚೀಲ, 10 ರಾಗಿ ಚೀಲ ಸೇರಿ ಇನ್ನಿತರ ಧವಸದ ಚೀಲಗಳು, ಆಹಾರ ಸಾಮಗ್ರಿಗಳು ನೀರು ಪಾಲಾಗಿದೆ. ಇದರಿಂದ ನಾಗಪ್ಪ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಾಕಿಕೆರೆ ಗ್ರಾಮದ ನಾಗರಾಜು, ಮಹಂತೇಶ್ ಅವರ ಮನೆಯ ಶೀಟು ಗಾಳಿಗೆ ಹಾರಿ ಹೋಗಿದೆ. ಮನೆಯ ಮೇಲ್ಚಾವಣಿಗೆ ಬಳಿದ್ದ ಕಬ್ಬಿಣದ ಆಂಗ್ಲರ್ ಸಹ ಬಿರುಗಾಳಿಗೆ ಹಾರಿದ್ದರಿಂದ ನಾಲ್ಕೈದು ಮನೆಯ ಹೆಂಚುಗಳು ಹಾಳಾಗಿವೆ.
ಗ್ರಾಮದ ವಿದ್ಯುತ್ ಸಂಪರ್ಕದ ಲೈನ್ ತುಂಡಾಗಿ ಬಿದ್ದಿತ್ತು. ವಿದ್ಯುತ್ ಕಂಬವೂ ಮುರಿದು ಬೀಳುವಂತಾಗಿತ್ತು. ವಿದ್ಯುತ್ ಕಡಿತವಾಗಿದ್ದರಿಂದ ಯಾವುದೇ ಅವಘಡ ಸಂಭವಿಸಲಿಲ್ಲ. ಬಿರುಗಾಳಿಗೆ ಹಲವು ರೈತರ ಬಾಳೆ, ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿವೆ. ಎಲೆಬಳ್ಳಿಗೂ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 5 ತಾಸಿಗೂ ಹೆಚ್ಚು ಹೊತ್ತು ವಿದ್ಯುತ್ ಸ್ಥಗಿತಗೊಂಡಿತ್ತು.
ಹದ ಮಳೆ: ದುಗ್ಗಾವರ, ಗೂಳಿಹಟ್ಟಿ, ದೊಡ್ಡಘಟ್ಟ, ನಾಕಿಕೆರೆ, ಕೆಂಕೆರೆ, ದೊಡ್ಡಕಿಟ್ಟದಹಳ್ಳಿ, ಜಾನಕಲ್, ದೊಡ್ಡಘಟ್ಟ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಅರ್ಧ ತಾಸಿಗೂ ಹೆಚ್ಚು ಹೊತ್ತು ಆಲಿಕಲ್ಲು ಮಳೆ ಸುರಿಯಿತು. ಇದರಿಂದಾಗಿ ಬೇಸಿಗೆ ಬಿರುಬಿಸಿಲಿಗೆ ಕಾದಿದ್ದ ಇಳೆ ತಂಪಾಯಿತು. ಜಮೀನು ಹದವಾಗಿದ್ದು ರೈತರು ಮಾಗಿ ಉಳುಮೆ ಮಾಡಲು ನೆರವಾಗಿದ್ದು, ಪೂರ್ವ ಮುಂಗಾರು ಹಂಗಾಮಿನ ಎಳ್ಳು, ಹೆಸರು ಬಿತ್ತನೆಗೆ ಸಹಕಾರಿಯಾಗಿದೆ.
ಭರ್ತಿಯಾದ ಚೆಕ್ಡ್ಯಾಂ:ದುಗ್ಗಾವರ ಸಮೀಪದಲ್ಲಿ ಈಚೆಗಷ್ಟೇ ಕಾಮಗಾರಿ ಮುಕ್ತಾಯವಾಗಿದ್ದ ಚೆಕ್ಡ್ಯಾಂ ಬಿರುಸಿನ ಮಳೆಗೆ ಭರ್ತಿಯಾಗಿದೆ. ಇದರಿಂದ ಈ ಭಾಗದ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ಜೀವಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಲ್ಲಾಪುರ, ಕಂಠಾಪುರ, ಮಾವಿನಕಟ್ಟೆ, ಬೀಸನಹಳ್ಳಿ, ಹೆಬ್ಬಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.