ಹಿರಿಯೂರು: ಮಹಿಳೆಯರನ್ನು ಸಂಘಟಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಯತ್ನ ಭವಿಷ್ಯದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ನೂತನ ಒಕ್ಕೂಟದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಸಂಘದ ನೆರವಿನಿಂದ ಮಹಿಳೆಯರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯಲ್ಲಿ ಬದಲಾವಣೆ ಕಂಡುಬಂದಿದೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ಕೃಷಿಗೆ ಪೂರಕವಾದ ಉಪಕಸುಬು, ನಿರ್ವಹಣೆ, ಅದಕ್ಕೆ ಬೇಕಿರುವ ಕೌಶಲ ಪಡೆದುಕೊಂಡಿರುವುದು ಸಂತಸ ತಂದಿದೆ. ಸ್ವಂತಕ್ಕೆ ಕುಟುಂಬ ನಿರ್ವಹಿಸಿಕೊಂಡು ಹೋಗುವ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸೆಂದಿಲ್ ಕುಮಾರ್, ಬಿ. ಗೀತಾ, ಕೊಲ್ಲಮ್ಮ, ಜಿ. ಕುಮಾರನಾಯ್ಕ್, ಎಂ.ಎ. ಶ್ರೀನಿವಾಸ್, ರಾಜಪ್ಪಸ್ವಾಮಿ, ಪೆಪ್ಸಿ ನಾಗರಾಜ್, ವೈ.ನಾಗರಾಜ್, ಸರವಣ ಕುಮಾರ್, ಕೆ. ನಾಗರಾಜ್, ಮಣಿಕಂಠನ್ ಪಾಲ್ಗೊಂಡಿದ್ದರು.