ಚಿತ್ರದುರ್ಗ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಶಾಲೆ ತೆರೆಯುವ ಪ್ರಯೋಗಕ್ಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ. ಜಿಲ್ಲೆಯ ಆಯ್ದ 12 ಶಾಲೆಗಳಲ್ಲಿಎಸ್ಸೆಸ್ಸೆಲ್ಸಿ ಮಕ್ಕಳಿಗೆ ತರಗತಿಗಳನ್ನು ಶುರು ಮಾಡಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಈ ಪ್ರಯೋಗ ನಡೆಯುತ್ತಿದೆ. ಕೋವಿಡ್ ಹರಡದಂತೆ ತಡೆಯವಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಕೊಠಡಿಯ ಬದಲು ಬಯಲಲ್ಲಿ ತರಗಳು ನಡೆಯುತ್ತಿವೆ. ಸ್ಯಾನಿಟೈಸರ್, ಮಾಸ್ಕ್ ಹಾಗೂ ಅಂತರವನ್ನು ಕಡ್ಡಾಯಗೊಳಿಸಲಾಗಿದೆ.
ತಾಲ್ಲೂಕಿನ ಆಯ್ದ ಒಂದು ಶಾಲೆಯಲ್ಲಿ ತರಗತಿ ಪ್ರಾರಂಭಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಟಿ.ಯೋಗೇಶ್ ಸೂಚನೆ ನೀಡಿದ್ದರು. ಪ್ರತಿ ತಾಲ್ಲೂಕಿನ ಎರಡು ಶಾಲೆಗಳನ್ನು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಆಯ್ಕೆ ಮಾಡಿಕೊಂಡಿದ್ದಾರೆ. ಆರು ತಾಲ್ಲೂಕಿನ 12 ಶಾಲೆಗಳಲ್ಲಿ ಆ.3ರಿಂದ ತರಗತಿ ನಡೆಯುತ್ತಿದೆ. ಪ್ರತಿ ಶಾಲೆಯ 25ರಿಂದ 30 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ, ಗೂಳಿಹಟ್ಟಿ, ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ, ಪಿಲಾಲಿ, ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ, ಕೊಡಗವಳ್ಳಿಹಟ್ಟಿ, ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಜಂಪಯ್ಯನಹಟ್ಟಿ, ಬಸವಶಿವನಕೆರೆ, ಮೊಳಕಾಲ್ಮುರು ತಾಲ್ಲೂಕಿನ ಬಾಂಡ್ರವಿ, ದೇವಸಮುದ್ರ ಹಾಗೂ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಹಾಗೂ ಓಬಳಾಪುರದಲ್ಲಿ ಶಾಲೆ ನಡೆಯುತ್ತಿವೆ.
‘ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಕಾಳಜಿಯಿಂದ ತರಗತಿ ಆರಂಭಿಸಲಾಗಿದೆ. ನಿತ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿವೆ. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಿಗೆ ಒತ್ತು ನೀಡಲಾಗಿದೆ. ಮುಖ್ಯ ಶಿಕ್ಷಕರು ವೇಳಾಪಟ್ಟಿಯನ್ನು ನಿರ್ಧರಿಸುತ್ತಾರೆ. ಪ್ರಯೋಗ ಯಶಸ್ವಿಯಾದರೆ ಇತರ ಶಾಲೆಗೆ ವಿಸ್ತರಿಸುವ ಸಾಧ್ಯತೆ ಇದೆ’ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.