ಧರ್ಮಪುರ: ಹೋಬಳಿಯ ಮ್ಯಾದನಹೊಳೆ-ಸಮುದ್ರದಹಳ್ಳಿ ಮಧ್ಯದ ಸುವರ್ಣಮುಖಿ ನದಿ ಸೇತುವೆ ಭಾರಿ ಮಳೆಯಿಂದಾಗಿ ಮಂಗಳವಾರ ರಾತ್ರಿ ಕುಸಿದಿದೆ.
ಈ ಸೇತುವೆ 1979-80ರಲ್ಲಿ ನಿರ್ಮಾಣಗೊಂಡಿದ್ದು, 50ರಿಂದ 60 ಮೀಟರ್ ಉದ್ದವಿದೆ. ಅತ್ಯಂತ ಹಳೆಯ ಸೇತುವೆ ಇದು.
ಒಂದು ತಿಂಗಳಿನಿಂದ ಸುವರ್ಣಮುಖಿ ನದಿ ಪಾತ್ರದಲ್ಲಿ ಅಪಾರ ಪ್ರಮಾಣದಮಳೆ ಬಂದಿದ್ದರಿಂದ ಸೇತುವೆ ಕುಸಿದಿದೆ. ಇದರಿಂದ ಕುಂದಲಗುರ, ಮ್ಯಾದನಹೊಳೆ, ಕೋಡಿಹಳ್ಳಿಯಿಂದ ಸಮುದ್ರದಹಳ್ಳಿಗೆ ಸಂಪರ್ಕ ಕಡಿದುಕೊಂಡಿದೆ.
ಮಂಗಳವಾರ ತಡರಾತ್ರಿ ಸೇತುವೆ ಕುಸಿದಿದ್ದರಿಂದ ಬುಧವಾರ ಮ್ಯಾದನಹೊಳೆಯಿಂದ ಸಮುದ್ರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಆರನಕಟ್ಟೆಗೆ ಪ್ರೌಢಶಾಲೆಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬುಧವಾರ ಮನೆಯಲ್ಲಿಯೇ ಉಳಿದುಕೊಳ್ಳುವಂತಾಯಿತು.
ಮ್ಯಾದನಹೊಳೆ ಗ್ರಾಮಸ್ಥರು ಪಡಿತರ ಆಹಾರ ಪದಾರ್ಥಗಳನ್ನು ಕೊಳ್ಳಲು ಸಮುದ್ರದಹಳ್ಳಿಗೆ 1.5 ಕಿ.ಮೀ ಹೋಗಬೇಕು. ಈಗ ಸೇತುವೆ ಕುಸಿದಿರುವುದರಿಂದ ಮ್ಯಾದನಹೊಳೆಯಲ್ಲಿಯೇ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದು ಪ್ರಗತಿಪರ ರೈತ ಎಂ.ಎಚ್.ಷಣ್ಮುಖಪ್ಪ ಒತ್ತಾಯಿಸಿದ್ದಾರೆ.
‘ಶಿರಾತಾಲ್ಲೂಕು ಮತ್ತು ಹಿರಿಯೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾದ್ದರಿಂದ 30ಸಾವಿರ ಕ್ಯುಸೆಕ್ ನೀರು ಹರಿದಿದೆ. ಸೇತುವೆ ಬಳಿ ಮರಳು ಗಣಿಗಾರಿಕೆ ನಡೆಯುತ್ತಿರುವುದರಿಂದ ಸೇತುವೆ ಕುಸಿದಿದೆ. ಶೀಘ್ರಹೊಸ ಸೇತುವೆ ನಿರ್ಮಿಸಬೇಕು’ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.