ಪರಶುರಾಂಪುರ: ಹಾಲಿಗೊಂಡನಹಳ್ಳಿ ಸಮೀಪ ವೇದಾವತಿ ನದಿಗೆ ನಿರ್ಮಿಸಿದ ಬ್ಯಾರೇಜ್ನಲ್ಲಿ ನೀರಿಗೆ ಇಳಿದ ಇಬ್ಬರು ಬುಧವಾರ ಕಣ್ಮರೆಯಾಗಿದ್ದಾರೆ. ಅಗ್ನಿಶಾಮಕ ದಳ ಮತ್ತು ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಾತ್ರಿವರೆಗೆ ಶೋಧ ಕಾರ್ಯ ನಡೆಸಿದರು.
ಚಳ್ಳಕೆರೆಯ ಮಂಜುನಾಥ್ (37) ಮತ್ತು ಮೋನಿಷಾ (8) ಎಂಬುವರು ಕಣ್ಮರೆಯಾದವರು. ಮಂಜುನಾಥ್ ಅವರು ಹಾಲಿಗೊಂಡನಹಳ್ಳಿಯಲ್ಲಿ ವಿವಾಹವಾಗಿದ್ದರು.
ಮಂಜುನಾಥ್ ಅವರು ಕುಟುಂಬ ಸಹಿತ ಬ್ಯಾರೇಜ್ ನೋಡಲು ಹೋಗಿದ್ದರು. ಮೋನಿಷಾ ಅವರು ಸಂಬಂಧಿಕರೊಂದಿಗೆ ಇಲ್ಲಿಗೆ ಬಂದಿದ್ದರು. ಈಜಲು ನೀರಿಗೆ ಇಳಿದಾಗ ಕಣ್ಮರೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಅರಿತು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಇಬ್ಬರಿಗೂ ಹುಡುಕಾಟ ನಡೆಸಿದರು. ಮುಳುಗುತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ನೀರಿನಲ್ಲಿ ಇಬ್ಬರೂ ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.