ಹಿರಿಯೂರು: ನಗರದ ಚಳ್ಳಕೆರೆ ರಸ್ತೆಯ ಆರ್.ಕೆ. ಪವರ್ ಜೆನ್ ಕಾರ್ಖಾನೆ ಎದುರು ಬುಧವಾರ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದುಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ಸಂಜಯ ನಗರದ ವೆಂಕಟರಾಮಯ್ಯ (48), ದೇವರಾಜ (38) ಮೃತಪಟ್ಟವರು. ಗಾಯಗೊಂಡಿದ್ದ ಜಯರಾಂ, ಗಿರೀಶ್ ಹಾಗೂ ಶ್ರೀನಿವಾಸ್ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಬಳ್ಳಾರಿ ಸಮೀಪದ ಪಾಂಡುರಂಗಸ್ವಾಮಿ ದೇವಸ್ಥಾನಕ್ಕೆ ಸ್ನೇಹಿತರೆಲ್ಲ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.