ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಶುಕ್ರವಾರ ಸುಗಮವಾಗಿ ಆರಂಭವಾಗಿದ್ದು, ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.
ಬೆಳಗಿನ ತಂಪಾದ ವಾತಾವರಣದಲ್ಲಿ ಮತದಾನ ಮಾಡುವ ಉತ್ಸಹದಿಂದ ಅನೇಕರು ಮತಗಟ್ಟೆಗೆ ಬರುತ್ತಿದ್ದಾರೆ. ಮತಗಟ್ಟೆ ಬಳಿ ಸರತಿ ಸಾಲು ಬೆಳೆದಿದ್ದು, ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಮತದಾನ ಆರಂಭಕ್ಕೂ 90 ನಿಮಿಷ ಮೊದಲು ಮತಗಟ್ಟೆಗಳಲ್ಲಿ ಸಿದ್ಧತೆ ನಡೆಯಿತು. ಅಣಕು ಮತದಾನ ಮಾಡಿ ಮತಯಂತ್ರಗಳ ಸುಸ್ಥಿತಿ ಖಚಿತಪಡಿಸಿಕೊಂಡ ಸಿಬ್ಬಂದಿ, ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಶುರು ಮಾಡಿದರು. ಅಧಿಕಾರಿಗಳು ಕೆಲ ಮತಗಟ್ಟೆಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿಜೆಪಿಯ ಗೋವಿಂದ ಎಂ.ಕಾರಜೋಳ, ಕಾಂಗ್ರೆಸ್ ನ ಬಿ.ಎನ್.ಚಂದ್ರಪ್ಪ, ಬಿಎಸ್ ಪಿಯ ಅಶೋಕ ಚಕ್ರವರ್ತಿ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯ ಎ.ನಾರಾಯಣಸ್ವಾಮಿ ಈವರೆಗೆ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.
ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಹೊಳಲ್ಕೆರೆ, ಹಿರಿಯೂರು ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರ ಹರಡಿಕೊಂಡಿದೆ. 9,25,543 ಪುರುಷರು, 9,31,229 ಮಹಿಳೆಯರು, 104 ಇತರೆ ಸೇರಿ ಒಟ್ಟು 18,56,876 ಮತದಾರರಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 2,168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎರಡು ಮತಯಂತ್ರಗಳನ್ನು ಬಳಸಲಾಗಿದೆ.