ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ತ್ಯಾಜ್ಯ ನೀರು ನಿಲ್ಲುತ್ತಿದ್ದು, ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ್ವಾರದಲ್ಲಿರುವ ವೈದ್ಯಾಧಿಕಾರಿ ವಸತಿನಿಲಯದ ಮುಂಭಾಗದಲ್ಲಿ ಹಲವು ದಿನಗಳಿಂದ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿದೆ. ಪಕ್ಕದಲ್ಲಿರುವ ಕುಡಿಯುವ ನೀರು ಸರಬರಾಜು ಕೊಳವೆಬಾವಿಯಿಂದ ಸೋರಿಕೆಯಾಗಿ ಈ ನೀರು ನಿಲ್ಲುತ್ತಿದೆ. ಮಲಿನಗೊಂಡ ನೀರು ಮತ್ತೆ ಕೊಳವೆಬಾವಿ ಸೇರುವ ಸಾಧ್ಯತೆ ಇದ್ದು, ಅನಾರೋಗ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ವಚ್ಛತೆ ಕಾಪಾಡುವ ಬಗ್ಗೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಬಗ್ಗೆ, ಡೆಂಗಿ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ವೈದ್ಯಾಧಿಕಾರಿ ಅವರ ಮನೆಯ ಮುಂದಿನ ಸ್ಥಿತಿ ಹೀಗಾದರೆ ಹೇಗೆ ಎಂದು ಗ್ರಾಮಸ್ಥರಾದ ಮಂಜಣ್ಣ, ನಾಗರಾಜ್ ದೂರಿದರು.
ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೊಳವೆಬಾವಿಯಿಂದ ನೀರು ಸೋರಿಕೆಯಾಗುವುದನ್ನು ತಡೆಯಬೇಕು, ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.