ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ದೇಹ ಹಾಗೂ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಗುರುವಾರ ವರದಿ ನೀಡಿದೆ.
ನಗರಸಭೆ ವತಿಯಿಂದ ಪೂರೈಕೆ ಮಾಡಿದ ನೀರಿನಲ್ಲಿ ವಿಷ ಬೆರೆಸಿದ ಆರೋಪ ಬಲವಾಗಿ ಕೇಳಿಬಂದಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ಮಹಿಳೆಯ ಮೃತದೇಹ ಹಾಗೂ ನೀರಿನ ಮಾದರಿಗಳನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದರು.
‘ವಿಷ ಬೆರೆಸಿದ ಶಂಕೆ ವ್ಯಕ್ತವಾಗಿದ್ದರಿಂದ ನೀರುಗಂಟಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಆಧಾರದ ಮೇರೆಗೆ ತನಿಖೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಓವರ್ ಹೆಡ್ ಟ್ಯಾಂಕ್, ಮೃತ ಮಹಿಳೆಯ ಮನೆಯ ನೀರು ಹಾಗೂ ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.
ಇದನ್ನೂ ಓದಿ: ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ: ಎಂಜಿನಿಯರ್ ಅಮಾನತಿಗೆ ಶಿಫಾರಸು