ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಗೆ ನಗರಸಭೆ ವತಿಯಿಂದ ಪೂರೈಕೆ ಮಾಡಿದ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿ ನೀಡಿದೆ.
ಕವಾಡಿಗರಹಟ್ಟಿಗೆ ಪೂರೈಕೆ ಮಾಡಿದ ನೀರಿನ ಐದು ಮಾದರಿಗಳಲ್ಲಿ ನಾಲ್ಕು ಮಾದರಿಯ ಸೂಕ್ಷ್ಮ ಜೀವಾಣು ಪರೀಕ್ಷಾ ಫಲಿತಾಂಶ ಗುರುವಾರ ಲಭ್ಯವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ವರದಿಯನ್ನು ಕಾಯ್ದಿರಿಸಲಾಗಿದೆ.
ಕವಾಡಿಗರಹಟ್ಟಿಯ ಓವರ್ ಹೆಡ್ ಟ್ಯಾಂಕ್, ಪ್ರಿಯದರ್ಶಿನಿ ಬಾಲಕರ ಪ್ರೌಢಶಾಲೆ ಸಮೀಪದ ಮಿನಿ ಟ್ಯಾಂಕ್, ಕೊಳವೆ ಮಾರ್ಗದ ಮೂಲಕ ಮನೆಗಳಿಗೆ ಪೂರೈಕೆ ಮಾಡಿದ ನಲ್ಲಿ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ.1ರಂದು ಸಂಗ್ರಹಿಸಿದ ನೀರಿನ ಮಾದರಿಯ ವರದಿ ಗುರುವಾರ ಜಿಲ್ಲಾಡಳಿತದ ಕೈಸೇರಿದೆ.
ಇದನ್ನೂ ಓದಿ: ಚಿತ್ರದುರ್ಗ ಕಲುಷಿತ ನೀರು ಪ್ರಕರಣ: ನೀರಿಗೆ ವಿಷ ಬೆರೆಸಿದ ಆರೋಪ, ತನಿಖೆ ಆರಂಭ
ಕುಡಿಯುವ ನೀರು ಪೂರೈಕೆ ಮಾಡುವ ಸಂಗ್ರಹಗಾರ ಹಾಗೂ ಕೊಳವೆ ಮಾರ್ಗವನ್ನು ಶುಚಿಗೊಳಿಸುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ವಾಂತಿ ಭೇದಿ ಪ್ರಕರಣ ಬೆಳಕಿಗೆ ಬಂದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಈ ನೀರಿನ ಪೂರೈಕೆಯನ್ನು ನಗರಸಭೆ ಸ್ಥಗಿತಗೊಳಿಸಿತ್ತು.