ಚಿತ್ರದುರ್ಗ: ಅಳಿವಿನಂಚಿನಲ್ಲಿರುವ ಸೂಕ್ಷ್ಮ ಪ್ರಾಣಿ ಎಂದೇ ಗುರುತಿಸಲಾಗಿರುವ ಕೆನ್ನಾಯಿ (ವೈಲ್ಡ್ ಡಾಗ್) ಜೋಗಿಮಟ್ಟಿ ವನ್ಯಧಾಮದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಹೆಣ್ಣು, ಗಂಡು ಹಾಗೂ ಮರಿಯ ಪರಿವಾರವೊಂದು ಜಲಮೂಲದಲ್ಲಿ ನೀರು ಕುಡಿಯುವಾಗ ಅರಣ್ಯ ಇಲಾಖೆಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಡುನಾಯಿ, ಸೀಳುನಾಯಿ ಎಂದು ಕರೆಸಿಕೊಳ್ಳುವ ಕೆನ್ನಾಯಿಗಳು ಸಾಮಾನ್ಯವಾಗಿ ದಟ್ಟ ಅರಣ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಚಿತ್ರದುರ್ಗದಂತಹ ಕುರುಚಲು ಕಾಡಿನಲ್ಲಿ ಕೆನ್ನಾಯಿ ಕಾಣಿಸಿಕೊಂಡಿದ್ದು ವನ್ಯಜೀವಿ ಪ್ರೇಮಿಗಳನ್ನು ಚಕಿತಗೊಳಿಸಿದೆ. ಜೋಗಿಮಟ್ಟಿ ವನ್ಯಧಾಮಕ್ಕೆ ಎಲ್ಲಿಂದ ಬಂದಿರಬಹುದು ಎಂಬ ಜಿಜ್ಞಾಸೆ ಶುರುವಾಗಿದೆ.
ಜೋಗಿಮಟ್ಟಿ ವನ್ಯಧಾಮಕ್ಕೆ ಪ್ರತಿ ಬೇಸಿಗೆಯಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಬೆಂಕಿ ಅವಘಡದಿಂದ ಕಾಡು ರಕ್ಷಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಇಂತಹದೊಂದು ಕ್ರಮ ಕೈಗೊಂಡಿದೆ. ಮಾನವ ಹಸ್ತಕ್ಷೇಪ ಕಡಿಮೆಯಾದ ಪರಿಣಾಮವಾಗಿ ಅಪರೂಪದ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿವೆ. ಮೂರು ವರ್ಷಗಳಿಂದ ಕಡವೆಯ ಗುಂಪೊಂದು ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ.
‘ವನ್ಯಜೀವಿಗಳ ಅನುಕೂಲಕ್ಕಾಗಿ ಜಲಮೂಲಗಳನ್ನು ಕೃತಕವಾಗಿ ನಿರ್ಮಿಸಲಾಗಿದೆ. ಇಂತಹ ಕಡೆ ಕ್ಯಾಮೆರಾ ಟ್ರ್ಯಾಪಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನೀರು ಕುಡಿಯಲು ಬರುವ ಪ್ರಾಣಿಗಳು ಈ ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ಫೆಬ್ರುವರಿಯಲ್ಲಿ ಕೆನ್ನಾಯಿ ಕುಟುಂಬವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾಹಿತಿ ನೀಡಿದ್ದಾರೆ.
ಭದ್ರಾ ಅರಣ್ಯದಲ್ಲಿ ಕೆನ್ನಾಯಿಗಳಿವೆ. ಚನ್ನಗಿರಿಯ ಕುಕ್ಕುವಾಡ ಉಬ್ರಾಣಿ ಅರಣ್ಯ ಇದಕ್ಕೆ ಹೊಂದಿಕೊಂಡಿದೆ. ಅಲ್ಲಿಂದ ಜೋಗಿಮಟ್ಟಿ ವನ್ಯಧಾಮಕ್ಕೆ ಇವು ಬಂದಿರುವ ಸಾಧ್ಯತೆ ಇದೆ.
-ಟಿ.ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿತ್ರದುರ್ಗ