ಚಳ್ಳಕೆರೆ: ಭಾರತದ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ದೇಶ-ವಿದೇಶಗಳಲ್ಲೂ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಆಯುರ್ವೇದಿಕ್ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಅಂತಿಮ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆಲ್ಲ ಔಷಧಕ್ಕಿಂತ ಆಯುರ್ವೇದ ಔಷಧ ಮನುಷ್ಯನ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಜನರಿಗೆ ಆರೋಗ್ಯದ ಸೇವೆ ಒದಗಿಸುತ್ತಿರುವ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಜಿ. ಬಾಲರೆಡ್ಡಿ, ಕಾರ್ಯದರ್ಶಿ ಎಂ. ಜಗದೀಶ್ ಮಾತನಾಡಿದರು.
ಸಂಸ್ಥೆ ಡೀನ್ ಲಕ್ಷ್ಮಣಕುಮಾರ್, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಿವಾಸ ಬನಿಗೋಳ, ವೈದ್ಯರಾದ ಸುನಿಲ್ಕುಮಾರ್, ಚಂದ್ರಪ್ಪ ಮಾತನಾಡಿದರು. ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರಮಾಣ ವಿತರಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಡಾ.ಎಚ್.ಎಂ.ಅರುಣ್, ಡಾ.ಲೀಲಾವತಿ, ಡಾ.ಸುಪ್ರಿಯಾ, ಸಂಜಯ್ ಇದ್ದರು.