ಮಂಗಳೂರು: ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿದ್ದ ತಮಿಳುನಾಡಿನ 10 ಮೀನುಗಾರರನ್ನು ಇಲ್ಲಿನ ಕಡಲ ತೀರದಿಂದ 20 ನಾಟಿಕಲ್ ಮೈಲಿ ದೂರದಲ್ಲಿ ರಕ್ಷಣೆ ಮಾಡಲಾಗಿದೆ.
ತಮಿಳುನಾಡಿನ ಲಾರ್ಡ್ ಆಫ್ ದಿ ಓಷಿಯನ್ ಬೋಟ್, ಎಂಜಿನ್ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿತ್ತು.
ಮಾಹಿತಿ ಪಡೆದ ಕರಾವಳಿ ಕಾವಲು ಪಡೆ, ಐಸಿಜಿ ರಾಜದೂತ್ ಹಡಗನ್ನು ಸ್ಥಳಕ್ಕೆ ಕಳುಹಿಸಿತ್ತು. ರಾಜದೂತ್ ಹಡಗಿನ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ಬೋಟ್ ಹಾಗೂ ಅದರಲ್ಲಿದ್ದ 10 ಜನ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ.
ಈ ಯಾಂತ್ರಿಕೃತ ಬೋಟ್ ಮೇ 14 ರಂದು ಪೋರಬಂದರ್ನಲ್ಲಿ ಲಂಗರು ಹಾಕಿತ್ತು. ಮೇ 19 ರಂದು ಪೋರಬಂದರ್ನಿಂದ ಹೊರಟ ಬೋಟ್, ಮಂಗಳೂರು ಸಮೀಪದ ಎಂಜಿನ್ ವೈಫಲ್ಯಕ್ಕೆ ಒಳಗಾಗಿತ್ತು.
ಮೀನುಗಾರರು ಹಾಗೂ ಬೋಟ್ ಅನ್ನು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ವೆಂಕಟೇಶ್ ತಿಳಿಸಿದ್ದಾರೆ.