ಮುಡಿಪು: ಸರಕು ಸಾಗಿಸುವ ಟೆಂಪೊದಲ್ಲಿ ಗೋವಾದ ಮದ್ಯದ ಬಾಟಲಿಗಳನ್ನು ತುಂಬಿದ್ದ ಪೆಟ್ಟಿಗೆಗಳನ್ನು ಬಚ್ಚಿಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಮುಡಿಪು- ನೆತ್ತಿಲಪದವು ಎಂಬಲ್ಲಿ ಶನಿವಾರ ಬಂಧಿಸಿದ್ದಾರೆ. 114 ಪೆಟ್ಟಿಗೆಗಳಲ್ಲಿ ತುಂಬಿದ್ದ ಮದ್ಯ ಹಾಗೂ ಟೆಂಪೊವನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
‘ಹೊನ್ನಾವರದ ರಾಧಾಕೃಷ್ಣ ಕಾಮತ್ ಅಲಿಯಾಸ್ ಸದಾನಂದ ಕಾಮತ್ ಬಂಧಿತ ಆರೋಪಿ. ಟೆಂಪೊದಲ್ಲಿ ತೆಂಗಿನ ಗೆರಟೆಗಳನ್ನು ಸಾಗಿಸುತ್ತಿದ್ದ ಆತ ಒಳಗಡೆ ಮದ್ಯದ ಬಾಟಲಿಗಳನ್ನು ಬಚ್ಚಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೆವು. ಆರೋಪಿಯಿಂದ ವಶಪಡಿಸಿಕೊಂಡ ಮದ್ಯದ ಮೌಲ್ಯ ₹ 6.88 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಯು ಈ ಹಿಂದೆಯೂ ಟೆಂಪೊದಲ್ಲಿ ಗೆರಟೆ ಮದ್ಯವನ್ನು ಬಚ್ಚಿಟ್ಟು ಸಾಗಿಸುವಾಗ ಸಿಕ್ಕಿಬಿದ್ದಿದ್ದ’ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಅಬಕಾರಿ ಇನ್ಸ್ಪೆಕ್ಟರ್ ಲಕ್ಷ್ಮಣ್ ಶಿವಣಗಿ ಮತ್ತು ಸಿಬ್ಬಂದಿ ಸುನಿಲ್ ಬೈಂದೂರು, ದೊಡ್ಡಪ್ಪ ಮತ್ತು ಸದಾಶಿವ ಹಕ್ಕ, ರವಿ ನಾರ್ವೇಕರ್, ಅರ್ಜುನ ಭಾಗೋಡಿ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.