ಮಂಗಳೂರು: ಬಜ್ಪೆ ಠಾಣೆ ವ್ಯಾಪ್ತಿಯ ಗಂಜಿಮಠ ಬಳಿಯ ಉಳಿಪ್ಪಾಡಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ 165 ಲೋಡ್ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಭೂ ವಿಜ್ಞಾನಿ ಮೂರ್ತಿ ಬಿ.ಕೆ. ನೇತೃತ್ವದಲ್ಲಿ ದಾಳಿ ನಡೆಸಿರುವ ತಂಡ, ಒಟ್ಟು ಮೂರು ಸ್ಥಳಗಳಲ್ಲಿ ಅನಧಿಕೃತ ಮರಳು ಸಂಗ್ರಹಿಸಿರುವುದನ್ನು ಪತ್ತೆ ಮಾಡಿದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಮೂರ್ತಿ ಬಿ.ಕೆ. ತಿಳಿಸಿದ್ದಾರೆ.
ಅಪಾಯಕ್ಕೆ ಸಿಲುಕಿದ್ದ ಮೂರು ಬೋಟ್
ಮಂಗಳೂರು: ಮೂರು ಬೋಟ್ಗಳು ನಗರದ ದಕ್ಕೆ ಅಳಿವೆ ಬಾಗಿಲಿಗೆ ಬರಲು ಸಾಧ್ಯವಾಗದೇ ಶುಕ್ರವಾರ ಸಂಜೆ ಅಪಾಯಕ್ಕೆ ಸಿಲುಕಿವೆ. ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಲಂಗರು ಕೂಡ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಬೋಟ್ನಲ್ಲಿ ಇರುವ ಅಲೆಕ್ಸ್ ಎಂಬುವವರು ಕರಾವಳಿ ಕಾವಲು ಪಡೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಸದಾ ಫಿಶರೀಸ್, ಎನ್ಎಂಪಿಟಿ ಫಿಶರೀಸ್ ಸೇರಿದಂತೆ ಒಟ್ಟು ಮೂರು ಬೋಟ್ನಲ್ಲಿ 20 ಜನರಿದ್ದು, ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುನ್ನೆಚ್ಚರಿಕೆ: ಲಕ್ಷದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಡಿಸೆಂಬರ್ 2 ಮತ್ತು 3 ರಂದು ಅಲೆಗಳ ಅಬ್ಬರ ಹೆಚ್ಚಾಗಲಿದೆ. 3 ರಿಂದ 6.4 ಮೀಟರ್ನಷ್ಟು ಎತ್ತರದ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 110–120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಇದು 130 ಕಿ.ಮೀ. ತಲುಪುವ ಸಾಧ್ಯತೆ ಇದೆ. ನಂತರ ಕ್ರಮೇಣವಾಗಿ ಚಂಡಮಾರುತವು ಉತ್ತರದತ್ತ ಹೊರಳಲಿದ್ದು, ಗಾಳಿಯ ವೇಗ ಕಡಿಮೆ ಆಗಲಿದೆ ಎಂದು ತಿಳಿಸಿದೆ.
‘ಸಿಪಿಎಂ ರಾಜ್ಯ ಸಮ್ಮೇಳನ ಜ.2ರಿಂದ
ಮಂಗಳೂರು: ಸಿಪಿಎಂನ 22 ನೇ ರಾಜ್ಯ ಸಮ್ಮೇಳನವನ್ನು ಜನವರಿ 2 ರಿಂದ 5 ರವರೆಗೆ ಮೂಡುಬಿದಿರೆಯ ಒಂಟಿಕಟ್ಟೆ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಉದ್ಘಾಟಿಸಲಿದ್ದಾರೆ. ಪಕ್ಷದ 22 ನೇ ಅಖಿಲ ಭಾರತ ಸಮ್ಮೇಳನವು ಏಪ್ರಿಲ್ನಲ್ಲಿ ಹೈದರಾಬಾದ್ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಆರ್. ಶ್ರೀಯಾನ್ ತಿಳಿಸಿದ್ದಾರೆ.(ಶುಕ್ರವಾರದ ಸಂಚಿಕೆಯ ಲ್ಲಿ ಡಿಸೆಂಬರ್ 2ರಿಂದ ಎಂದು ಪ್ರಕಟವಾಗಿತ್ತು.)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.