ವಿದೇಶಿ ಅಡಿಕೆ ಬೇರೆ ಬೇರೆ ಮಾರ್ಗಗಳಲ್ಲಿ ದೇಶಕ್ಕೆ ನುಸುಳಿ ಬರುತ್ತಿದೆ. ಇತ್ತೀಚೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮಗ್ರ ಕಾರ್ಗೊ ಟರ್ಮಿನಲ್ ಮೂಲಕ ಅಡಿಕೆ ಮಂಗಳೂರಿಗೆ ಬಂದು ಬೇರೆ ಕಡೆಗಳಿಗೆ ರವಾನೆಯಾಗಿದೆ. ಹೀಗೆ ಹೊರ ಭಾಗಗಳಿಂದ ಬರುವ ಅಡಿಕೆಯ ಮೂಲ, ಬೆಲೆ ಮತ್ತು ತೆರಿಗೆ ಪಾವತಿಯಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ಇದರಿಂದ ಅಡಿಕೆ ದರ ಸ್ಥಿರತೆಗೆ ಶ್ರಮಿಸುತ್ತಿರುವ ಮಾರಾಟ ಸಹಕಾರ ಸಂಸ್ಥೆಗಳು, ಅಡಿಕೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ ಎಂದು ಅವರು ಹೇಳಿದ್ದಾರೆ.