ಬಂಟ್ವಾಳ (ದ.ಕ.):ದುಷ್ಕರ್ಮಿಗಳತಂಡವೊಂದು ಮನೆಗೆ ನುಗ್ಗಿಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅತನ ಪತ್ನಿಯ ಮೇಲೆ ತಲವಾರಿನಿಂದ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೇರೆಮಜಲು ಎಂಬಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.
ಮೇರೆಮಜಲು ನಿವಾಸಿ ಪಂಚಾಯಿತಿ ಸದಸ್ಯ ಯೋಗೀಶ್ ಪ್ರಭು ಮತ್ತು ಅವರ ಪತ್ನಿ ಶೋಭಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇರೆಮಜಲು ನಿವಾಸಿ ರೌಡಿಶೀಟರ್ ಪ್ರಸಾದ್ ಬೆಳ್ಚಾಡ ಮತ್ತು ಆತನ ಜತೆ ಇಬ್ಬರು ಸ್ನೇಹಿತರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು, ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಮುಂಜಾನೆ 4 ಗಂಟೆಯ ವೇಳೆ ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಅವರ ಮನೆಗೆ ಬಂದು ಬಾಗಿಲು ಬಡಿದು ಎಬ್ಬಿಸಿದ್ದು, ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿ ಏಕಾಏಕಿ ತಲವಾರಿನಿಂದ ಯೋಗೀಶ್ ಪ್ರಭು ಮೇಲೆ ಪ್ರಸಾದ್ ಬೆಳ್ಚಾಡ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಜತೆಯಲ್ಲಿದ್ದ ಪತ್ನಿ ಶೋಭಾ ಅವರಿಗೂ ಗಾಯಗಳಾಗಿವೆ.
ಸ್ಥಳಕ್ಕೆ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಇನ್ ಸ್ಪೆಕ್ಟರ್ ಟಿ. ಡಿ.ನಾಗರಾಜ್, ಗ್ರಾಮಾಂತರ ಸಬ್ ಇನ್ ಸ್ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಆರೋಪಿಗಳ ಶೋಧ ನಡೆಸಿದ್ದಾರೆ.