ನಿಯಾಶ ಆಯುರ್ವೇದ ಆರೋಗ್ಯ ಕೇಂದ್ರ ಉದ್ಘಾಟನೆ ಜ. 28ರಂದು

ಮಂಗಳೂರು: ನರಿಂಗಾನದ ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು (ವೈಎಎಂಸಿಎಚ್) ತೊಕ್ಕೊಟ್ಟು ಬಳಿಯ ಪಂಡಿತ್ ಹೌಸ್ನಲ್ಲಿ ನಿಯಾಶ ಆಯುರ್ವೇದ ಹೆಲ್ತ್ ಆ್ಯಂಡ್ ವೆಲ್ನೆಸ್ ಕೇಂದ್ರವನ್ನು ಆರಂಭಿಸಿದ್ದು ಇದೇ 28ರಂದು ಲೋಕಾರ್ಪಣೆಗೊಳ್ಳಲಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ ಎಚ್., ‘ಈ ಕೇಂದ್ರವು ಆಯುರ್ವೇದ ಮಲ್ಟಿಸ್ಪೆಷಾಲಿಟಿ ಚಿಕಿತ್ಸೆಯ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. 32 ಹಾಸಿಗೆಗಳ ಸೌಲಭ್ಯ ಇಲ್ಲಿದೆ. ಸ್ನಾಯು– ಮೂಳೆ ಸಂಬಂಧಿ ಆರೋಗ್ಯ ಸಮಸ್ಯೆಗಳು, ಚರ್ಮರೋಗ, ನರವ್ಯೂಹ ಸಮಸ್ಯೆ, ಸ್ತ್ರೀರೋಗ, ಬೊಜ್ಜು, ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಆಯುರ್ವೇದದ ತಜ್ಞ ವೈದ್ಯರಿಂದ ಸಮಗ್ರ ಹಾಗೂ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ಇಲ್ಲಿ ಲಭ್ಯ’ ಎಂದರು.
‘ನಿಯಾಶ ಯೂತ್ ಹಾಸ್ಟೆಲ್ ಸಂಸ್ಥೆ ಈ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾವಕಾಶ ಒದಗಿಸಿದೆ. ಈ ಕೇಂದ್ರದ ನಿರ್ವಹಣೆಯನ್ನು ಅವರೇ ನಿರ್ವಹಿಸಲಿದ್ದಾರೆ. ಆದರೆ, ವೈದ್ಯಕೀಯ ಸೇವೆಯನ್ನು ಸಂಪೂರ್ಣವಾಗಿ ನಮ್ಮ ಆಸ್ಪತ್ರೆಯಿಂದ ಒದಗಿಸಲಾಗುತ್ತದೆ’ ಎಂದರು.
‘ಕೇಂದ್ರವನ್ನು ಭಾರತೀಯ ವೈದ್ಯ ಪದ್ಧತಿಯ ವೈದ್ಯಕೀಯ ಮೌಲ್ಯಾಂಕನ ಮಂಡಳಿ (ಎನ್ಸಿಐಎಸ್ಎಂ) ಅಧ್ಯಕ್ಷ ಡಾ.ರಘುರಾಮ ಭಟ್ ಯು. ಉದ್ಘಾಟಿಸುವರು. ಸಂಗೀತ ನಿರ್ದೇಶಕ ಗುರುಕಿರಣ್, ಯೇನೆಪೊಯ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲ ಕುಞಿ, ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮುರಳೀಧರ ಶರ್ಮ ಭಾಗವಹಿಸುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ನಿಯಾಶ ಯೂತ್ ಹಾಸ್ಟೆಲ್ನ ನಿರ್ದೇಶಕ ರಮೇಶ್ ಬೋಳಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.