ಬಂಟ್ವಾಳ: ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳು ಭಾರತ ಬಿಟ್ಟು ತೊಲಗಬೇಕು. ಇದಕ್ಕಾಗಿ ರೈತ ಕಾರ್ಮಿಕರಿಂದ ಕ್ವಿಟ್ ಇಂಡಿಯಾ ಮಾದರಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಇಲ್ಲಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಎದುರು ರೈತ ಕಾರ್ಮಿಕ ಸಂಘಟನೆ ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ವರ್ಗ, ಶ್ರಮಿಕರಿಗೆ ವಂಚಿಸಿ ಕಾನೂನು ತಿದ್ದುಪಡಿಗೊಳಿಸಲು ಹೊರಟಿವೆ’ ಎಂದು ಆರೋಪಿಸಿದರು.
ಮುಖಂಡರಾದ ಉದಯ ಕುಮಾರ್ ಬಂಟ್ವಾಳ, ವಿನಯ ನಡುಮೊಗರು, ಸೇವಂತಿ, ದೇಜಪ್ಪ ಪೂಜಾರಿ, ಲಿಯಾಕತ್ ಖಾನ್, ಅಪ್ಪು ನಾಯ್ಕ ನಾರಾಯಣ ಕೊಯಿಲೋಡಿ, ಈಶ್ವರ, ದಾಮೋದರ ಪರಕಜೆ ಇದ್ದರು.