ಬೆಳ್ತಂಗಡಿ: ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ವಿ. ಸೋಮಣ್ಣ ವಾರದ ಹಿಂದೆ ಬೆಳ್ತಂಗಡಿಗೆ ಬೇಟಿ ನೀಡಿದ ಸಂದರ್ಭ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಘೋಷಿಸಿದ್ದು, ಈ ಬಗ್ಗೆ ಅಧಿಕಾರಿಗಳು ಮಂಗಳವಾರ ಜಾಗ ಗುರುತಿಸುವಿಕೆ ಕಾರ್ಯ ನಡೆಸಿದರು.
ಧರ್ಮಸ್ಥಳ ಹಾಗೂ ಲಾಯಿಲ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಕಾರ್ಯ ನಡೆದಿದ್ದು ಬೆಳ್ತಂಗಡಿಯ ಸಾಲು ಮರದ ತಿಮ್ಮಕ್ಕ ಉದ್ಯಾನ ಸಮೀಪದ ಲಾಯಿಲ ಹಾಗೂ ಮೇಲಂತಬೆಟ್ಟು ಗಡಿ ಭಾಗಗಳಲ್ಲಿ ಅಧಿಕಾರಿಗಳು ಸ್ಥಳ ವೀಕ್ಷಣೆಯನ್ನು ಮಾಡಿದ್ದಾರೆ.
ಮಿನಿ ವಿಮಾನ ನಿಲ್ದಾಣಕ್ಕೆ 100 ಎಕರೆಯಷ್ಟು ಜಾಗ ಬೇಕಾಗಿದ್ದು, ಅದರ ಸುತ್ತಮುತ್ತ ಬೆಟ್ಟ ಗುಡ್ಡಗಳು ಅಡ್ಡ ಬಾರದಂತೆ ಜಾಗ ಗುರುತಿಸಬೇಕಾಗಿರುವುದರಿಂದ ಈ ಪ್ರದೇಶದಲ್ಲೂ ವೀಕ್ಷಣೆ ಮಾಡಲಾಗಿದೆ.
ಪೂರ್ವಿ ಮಠ್ ನೇತೃತ್ವದ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ವಿಭಾಗದ ಅಧಿಕಾರಿಗಳು, ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕಂದಾಯ ನಿರೀಕ್ಷಕ ಪ್ರತೀಶ್, ಲಾಯಿಲ ಗ್ರಾಮಲೆಕ್ಕಿಗರಾದ ರನಿತಾ, ಗ್ರಾಮ ಸಹಾಯಕ ಸತೀಶ್ ಇದ್ದರು.