ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಆಯೋಜಿಸಿದ್ದ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಪ್ಯಾ ಮುಖ್ಯಸ್ಥ ಡಾ.ಮನೀಶ್ ವೈಷ್ಣವಿ ಭಾನುವಾರ ಬೆಳ್ತಂಗಡಿ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರಿಗೆ ಪ್ರಶಸ್ತಿ ಪತ್ರ, ಪದಕವನ್ನು ಪ್ರದಾನ ಮಾಡಿದರು.
‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಎಲ್ಲಾ ಷರತ್ತು, ನಿಯಮಗಳಿಗನುಸಾರವಾಗಿ ಕಾರ್ಯಕ್ರಮ ಮಾಡಲಾಗಿದೆ. ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಷರತ್ತುಗಳನ್ನು ಪಾಲಿಸಿಕೊಂಡು ತಾಲ್ಲೂಕಿನ ಜನತೆ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ. ಮೂರು ಸಾವಿರಕ್ಕೂ ಹೆಚ್ಚು ವಿಡಿಯೊಗಳು ಬಂದಿದೆ’ ಎಂದುಡಾ. ಮನೀಶ್ ವೈಷ್ಣವಿ ತಿಳಿಸಿದರು.
‘ದೇಶಭಕ್ತಿ ಗೀತೆ ಸ್ಪರ್ಧೆಗೆ ತಾಲ್ಲೂಕಿನ ಜನರ ಜೊತೆಗೆ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶದಿಂದ ಸ್ಪಂದನೆ ಸಿಕ್ಕಿದೆ. ಪ್ರಶಸ್ತಿಯು ತಾಲ್ಲೂಕಿನ ಜನತೆಗೆ ಸಿಕ್ಕಿದ ಗೌರವವಾಗಿದೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ’ ಎಂದರು.
ಆಗಸ್ಟ್ 25 ರಂದು ಸ್ಪರ್ಧೆಯ ಫಲಿತಾಂಶ ಪ್ರಕಟವಾಗಲಿದ್ದು, ಪ್ರಥಮ, ದ್ವಿತೀಯ ಬಹುಮಾನದ ಜತೆಗೆ ಸ್ಪರ್ಧಿಸಿದ ಸ್ಪರ್ಧಾಳುಗಳನ್ನು ಗೌರವಿಸಲಾಗುವುದು.ಬೆಳಗಾವಿ, ಬೀದರ್, ಬೆಂಗಳೂರು, ಮೈಸೂರು, ಕಾಸರಗೋಡು, ಮಹರಾಷ್ಟ್ರ, ದೆಹಲಿ ಹಾಗೂ ವಿದೇಶದಿಂದ ಭಾಗಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ಶೆಟ್ಟಿ, ನಿರ್ದೇಶಕ ಸ್ಮಿತೇಶ್ ಬಾರ್ಯ, ಅನೀಶ್ ವೇಣೂರು ಇದ್ದರು.