ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಮಂಗಳೂರಿನ ರುತ್ ಕ್ಲಾರ್ ಡಿಸಿಲ್ವ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಸೋಮವಾರ ಫಲಿತಾಂಶ ಪ್ರಕಟಗೊಂಡಿದೆ.
‘ಈ ಬಾರಿಯ ಪರೀಕ್ಷೆ ಕಠಿಣವಾಗಿತ್ತು. ಆದರೆ ನಾನು ಉತ್ತಮವಾಗಿ ಪರೀಕ್ಷೆ ಎದುರಿಸಿದ್ದೆ. ಪ್ರಥಮ ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಸಿ.ಎ. ಪರೀಕ್ಷೆ ತೇರ್ಗಡೆಯಾಗುವುದೇ ಅದ್ಭುತ’ ಎಂದು ರುತ್ ಡಿಸಿಲ್ವ ಪ್ರತಿಕ್ರಿಯಿಸಿದರು.
‘ಸಿ.ಎ. ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದು ರುತ್ ಇತಿಹಾಸ ಸೃಷ್ಟಿಸಿದ್ದಾರೆ. ಆಕೆ ಛಲದಿಂದ ಅಧ್ಯಯನ ಮಾಡಿ, ಸಾಧನೆ ಮಾಡಿದ್ದಾರೆ’ ಎಂದು ಮಾರ್ಗದರ್ಶಕ ನಂದಗೋಪಾಲ್ ತಿಳಿಸಿದರು.
ರುತ್ ಅವರಿಗೆ ತರಬೇತಿ ನೀಡಿದ್ದ ವಿವಿಯನ್ ಪ್ರತಿಕ್ರಿಯಿಸಿ, ‘ರುತ್ ಸಂವಹನ ಕೌಶಲ ಅತ್ಯುತ್ತಮವಾಗಿದೆ. ತನ್ನ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆ ಹೊಂದಿರುವುದೇ ಆಕೆಯ ಸಾಧನೆಯ ಯಶಸ್ಸು’ ಎಂದಿದ್ದಾರೆ.
ಈಕೆ ಮಂಗಳೂರಿನ ರಫರ್ಟ್ ಡಿಸಿಲ್ವ ಮತ್ತು ರೋಸಿ ಮಾರಿಯಾ ಡಿಸಿಲ್ವ ದಂಪತಿ ಪುತ್ರಿ.