ಮಂಗಳೂರು: ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಲ್ಲಿನ ಲೋಕಾಯುಕ್ತ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಿರುದ್ಧ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾನೂನು ವಿದ್ಯಾರ್ಥಿನಿಯೊಬ್ಬರು ರಾಜೇಶ್ ವಿರುದ್ಧ ದೂರು ನೀಡಿದ್ದಾರೆ.
‘ಆಗಸ್ಟ್ 8ರಂದು ಕರಂಗಲ್ಪಾಡಿಯಲ್ಲಿರುವ ರಾಜೇಶ್ ಅವರ ಕಚೇರಿಯಲ್ಲಿ ತರಬೇತಿಗೆ ಸೇರಿದ್ದೆ. ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸಿದ್ದ ಈ ವ್ಯಕ್ತಿ, ಸೆಪ್ಟೆಂಬರ್ 25ರಂದು ಚೇಂಬರ್ಗೆ ಕರೆದು ಅಸಭ್ಯವಾಗಿ ವರ್ತಿಸಿ, ಅತ್ಯಾಚಾರ ಮಾಡಲು ಯತ್ನಿಸಿದರು’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
‘ಮಂಗಳೂರು ದಕ್ಷಿಣದ ಎಸಿಪಿ ರಂಜಿತ್ ಬಂಡಾರು ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಪಾರದರ್ಶಕವಾಗಿ ತನಿಖೆ ನಡೆಯುತ್ತದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ರಾಜೇಶ್ ಮತ್ತು ಸಂತ್ರಸ್ತ ವಿದ್ಯಾರ್ಥಿನಿ ಮಾತನಾಡಿದ್ದು ಎನ್ನಲಾದ ಮೊಬೈಲ್ ಕರೆಯ ಧ್ವನಿಮುದ್ರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿದ್ಯಾರ್ಥಿನಿಯನ್ನು ಕಚೇರಿಗೆ ಬರುವಂತೆ ಮತ್ತು ‘ಮುಂದೆಂದೂ ಈ ರೀತಿ ನಡೆದುಕೊಳ್ಳುವುದಿಲ್ಲ, ಇಲ್ಲಿಗೇ ಬಿಟ್ಟು ಬಿಡು’ ಎಂದು ವಕೀಲ ವಿನಂತಿಸುವ ಮಾತು ಈ ಧ್ವನಿ ಮುದ್ರಣದಲ್ಲಿತ್ತು.
ರಾಜೇಶ್, ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದಿಸಲು ಸರ್ಕಾರದಿಂದ ನೇಮಕಗೊಂಡಿರುವ ವಕೀಲ.