ಮಂಗಳೂರು: ‘ಕಾಂಗ್ರೆಸ್ ಗೂಂಡಾ ಪ್ರವೃತ್ತಿ ತೋರಿದರೆ, ನಮ್ಮ ಕಾರ್ಯಕರ್ತರೂ ಇದಕ್ಕೆ ಉತ್ತರಿಸಲು ಸಮರ್ಥರಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಯ ಮೇಲೆ ನಡೆದ ದಾಳಿ ಖಂಡಿಸಿದ ಅವರು, ‘ಕಾಂಗ್ರೆಸ್ ಮತ್ತು ಎನ್ಎಸ್ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆಯ ಮೇಲೆ ದಾಳಿ ಮಾಡುವ ಮೂಲಕ ಗೂಂಡಾ ಸಂಸ್ಕೃತಿಯನ್ನು ವೈಭವೀಕರಿಸಿದ್ದಾರೆ. ಸಮಂಜಸ ಅಲ್ಲದ ವಿಷಯದ ಬಗ್ಗೆಯೂ ಆಂದೋಲನ ಮಾಡುವ ಹಕ್ಕು ವಿರೋಧ ಪಕ್ಷಕ್ಕೆ ಇದೆ. ಅದು ಬಿಟ್ಟು, ಈ ರೀತಿ ದಾಳಿ ಮಾಡಿರುವುದು ಕಾಂಗ್ರೆಸ್ನ ಹತಾಶ ಮನೋಭಾವ ತೋರಿಸುತ್ತದೆ’ ಎಂದರು.
‘ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಬೇರೆ ಬೇರೆ ಭಾಗದವರು ಬಂದು ದಾಳಿ ನಡೆಸಿದ್ದು, ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಈ ಘಟನೆ ಹಿಂದೆ ಯಾರಿದ್ದಾರೆ, ಯಾರು ಪ್ರೇರಣೆ ನೀಡಿದ್ದಾರೆ ಎಂಬುದನ್ನು ತನಿಖೆ ನಡೆಸಿ, ಬಂಧಿಸಬೇಕು’ ಎಂದು ಆಗ್ರಹಿಸಿದರು.