ಮಂಗಳೂರು: ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರ ಪಡೆದ ಕಾಂಗ್ರೆಸ್ ಈಗ ರಾಜ್ಯವನ್ನು ದಿವಾಳಿ ಮಾಡಿದ್ದು ಸಣ್ಣ ರೋಡು ಅಥವಾ ತೋಡು ಅಭಿವೃದ್ಧಿಗೂ ಹಣ ಇಲ್ಲದೆ ಪರದಾಡುತ್ತಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ದೂರಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೆ ಸರ್ಕಾರ ಜನರಿಗೆ ಮಂಕುಬೂದಿ ಎರಚಿದೆ. ಜಿಹಾದಿಯಾಗಿರಲಿ ದೇಶದ್ರೋಹಿ ಆಗಿರಲಿ, ಪಕ್ಷಕ್ಕೆ ಮತ ಸಿಕ್ಕಿದರೆ ಸಾಕು ಎಂಬ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಗ್ಯಾರಂಟಿಗಳಿಂದ ಜನರಿಗೆ ಉಪಯೋಗ ಆಗದೇ ಇದ್ದರೂ ಅವುಗಳ ಬಗ್ಗೆ ಜಾಹೀರಾತು ನೀಡಿ ತೆರಿಗೆ ಹಣವನ್ನು ಪೋಲು ಮಾಡುವುದರಲ್ಲಿ ಸರ್ಕಾರ ಮುಂದೆ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಕೇವಲ ಆದೇಶಗಳು ಆಗುತ್ತಿವೆಯೇ ಹೊರತು ಕೆಲಸಗಳು ಆಗುತ್ತಿಲ್ಲ. ಅಲ್ಪಸಂಖ್ಯಾತರಿಗೆ ಸ್ವಲ್ಪ ಹಣ ತೆಗೆದಿರಿಸಿದ್ದು ಬಿಟ್ಟರೆ ಉಳಿದ ಯಾರಿಗೂ ಪ್ರಯೋಜನ ಆಗಲಿಲ್ಲ ಎಂದು ಭರತ್ ಶೆಟ್ಟಿ ಹೇಳಿದರು.
ಇಂಧನ ಉತ್ಪಾದನೆ ಸಾಕಷ್ಟು ಇದ್ದು ಉಳಿತಾಯ ಆಗುತ್ತಿದ್ದ ರಾಜ್ಯದಲ್ಲಿ ಈಗ ಇಂಧನ ಕೊರತೆ ಉಂಟಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲು ಸರ್ಕಾರ ಸಾಹಸ ಮಾಡುತ್ತಿದೆ. ವಿದ್ಯುತ್ ಅಭಾವದಿಂದ ಬಳ್ಳಾರಿಯ ಜೀನ್ಸ್ ಉದ್ಯಮ ಸಂಕಷ್ಟದಲ್ಲಿದೆ. ಟ್ಯಾಂಕರ್ ಮಾಫಿಯಾ ಜೊತೆಗೂಡಿ ನೀರಿನ ಸಮಸ್ಯೆ ಉಂಟುಮಾಡಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿದರು. ವಸಂತ ಜೆ. ಪೂಜಾರಿ ಸಂಜಯ ಪ್ರಭು ಪ್ರೇಮಾನಂದ ಶೆಟ್ಟಿ ಮತ್ತು ಸಂಧ್ಯಾ ವೆಂಕಟೇಶ್ ಪಾಲ್ಗೊಂಡಿದ್ದರು
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಖಜಾಂಚಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ, ಮಹಿಳಾ ಮೋರ್ಚಾ ಉಪಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಇದ್ದರು.